ಹೊಸನಗರ ; ವಂದೇ ಮಾತರಂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಚ್ಚು ಹಚ್ಚಿದಂತಹ ಸಾಹಿತ್ಯ. ಬಂಗಾಳವನ್ನು ಒಡೆಯಬೇಕೆಂಬ ಸಂಚು ರೂಪಿಸಿದವರ ಹುಟ್ಟಡಗಿಸಿ ವಿಭಜಕ ಶಕ್ತಿಗಳಿಗೆ ಉತ್ತರವಾಗಿದ್ದು ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಎಂದು ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ ಹೇಳಿದರು.
ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಮತ್ತು ರಾಷ್ಟ್ರೋತ್ಥಾನ ಬಳಗ ಮತ್ತು ಗ್ರಾಮಭಾರತಿ ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಂದೇ ಮಾತರಂ ಏರಿಳಿತಗಳೇ ನಮ್ಮ ರಾಷ್ಟ್ರಜೀವನದ ಏರಿಳಿತಗಳು. ಅದರಲ್ಲಿನ ಭಾವ ನಮ್ಮ ದೇಶದ ಅಸ್ಮಿತೆಯ ಪ್ರತೀಕ. ವಂದೇ ಮಾತರಂಗೆ ನೀಡುವ ಗೌರವ ರಾಷ್ಟ್ರಕ್ಕೆ ನೀಡುವ ಗೌರವ ಎಂದು ಹೇಳಿದ ಅವರು, ಸಾಹಿತಿ ಶಿವರಾಮು ಅವರ ‘ಒಂದು ಕಥೆ ಒಂದು ವ್ಯಥೆ’ ಪುಸ್ತಕದ ಅವಲೋಕನವನ್ನು ಮಾಡಿ ಪ್ರತಿಯೊಬ್ಬರು ಈ ಪುಸ್ತಕವನ್ನು ಓದಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ವಂದೇ ಮಾತರಂಗೆ 150 ವರ್ಷ ಪೂರ್ಣವಾಗುವ ವೇಳೆಯಲ್ಲಿ ಗ್ರಾಮೋತ್ಥಾನ, ರಾಷ್ಟ್ರೋತ್ಥಾನ ಬಳಗ ಮತ್ತು ಗ್ರಾಮಭಾರತಿ ಟ್ರಸ್ಟ್, ವಂದೇ ಮಾತರಂ ಗೋಷ್ಠಿ ಗಾಯನ ಕಾರ್ಯಕ್ರಮವನ್ನು ಆಯೋಜಿಸುವ ವೇಳೆಯಲ್ಲಿಯೇ, ಕೇಂದ್ರ ಸರ್ಕಾರ ಸಹ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿ ಆದೇಶವನ್ನು ಹೊರತಂದಿರುವುದು ಖುಷಿ ತಂದಿದೆ. ವಂದೇ ಮಾತರಂ ಹಾಡುವ ಮೂಲಕ ಸ್ವತ್ವದ ಸಂದೇಶವನ್ನು ಮುಂದಿನ ಪೀಳಿಗೆಗೆ ಸಾರೋಣ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ಗಾಯಕ ಗರ್ತಿಕೆರೆ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಹೆಬ್ಬಾರ್ ಮತ್ತು ನಿವೃತ್ತ ಶಿಕ್ಷಕ, ಲೇಖಕ ತಿರುಪತಿ ನಾಯಕ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಂದೇ ಮಾತರಂ ಗಾಯನ ಕಾರ್ಯಕ್ರಮದೊಂದಿಗೆ ಭರತನಾಟ್ಯ ಪ್ರದರ್ಶನವು ನಡೆಯಿತು. ಕೆ.ಎಸ್ ವಿನಾಯಕ ಅವರ ವಂದೇ ಮಾತರಂ ಕುರಿತ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಲಾ ಭಾರತಿ ನೃತ್ಯ ಶಾಲೆಯ ವಿದುಷಿ ಆರತಿ ಮಹೇಶ್ ನಿರ್ದೇಶನದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ.ಎಸ್. ನಳೀನ್ ಚಂದ್ರ, ಶೃತಿ ಶರತ್ ನಿರೂಪಿಸಿದರು, ವಿನಾಯಕ ಪ್ರಭು ಸ್ವಾಗತಿಸಿದರು, ಧನ್ಯಶ್ರೀ ವಂದಿಸಿದರು.
ವಿನಾಯಕ ಲೋಕ ಖ್ಯಾತಿಯ ಕೆ.ಎಸ್. ವಿನಾಯಕರಿಗೆ ಸನ್ಮಾನ
ಹೊಸನಗರ ; ತಾಲ್ಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ನಡೆದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಉತ್ಸವದಲ್ಲಿ ಹೊಸನಗರದ ವಿನಾಯಕ ಲೋಕ ಖ್ಯಾತಿಯ ಕೆ.ಎಸ್. ವಿನಾಯಕರಿಂದ ವಂದೇ ಮಾತರಂ 150ರ ಸಂಭ್ರಮದ ವಿಶೇಷ ಚಿತ್ರಪ್ರದರ್ಶನ ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಬಳೆಗಾರ ಮಠದ ಕಿರಿಯಪೀಠಾಧಿಪತಿಗಳಾದ ಅಕ್ಷೋಭ ರಾಮತೀರ್ಥ ಶ್ರೀಪಾದ ಅವರಿಂದ ಕೆ.ಎಸ್. ವಿನಾಯಕರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಬಸವನಗೌಡ, ಅನಂತರಾವ್ ವರಯೂರು, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಹೆಚ್. ಪ್ರಭಾಕರ್, ಹನಿಯಾ ರವಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





