ಗಾಂಧಿ ಜೊತೆ ಗೋಡ್ಸೆ ಪುಸಕ್ತ ಸಂಗ್ರಹ ಇದ್ದಾಗ ಮಾತ್ರವೇ ಪರಿಪೂರ್ಣ ಜ್ಞಾನ ಲಭ್ಯ : ಕಸಾಪ ಅಧ್ಯಕ್ಷ ಗಣೇಶ್ ಮೂರ್ತಿ

Written by Mahesha Hindlemane

Published on:

ಹೊಸನಗರ : ಪುಸ್ತಕದ ಜ್ಞಾನ ಮಸ್ತಕಕ್ಕೆ ಇಳಿದಾಗ ಮಾತ್ರವೇ ಮನಸ್ಸು ಪರಿವರ್ತನೆಗೊಂಡು ನಮ್ಮ ಸುತ್ತಲಿನ ಪ್ರಪಂಚವನ್ನೆ ಬದಲಿಸುವ ಶಕ್ತಿಯಾಗಲಿದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಹೆಚ್.ಎಂ.ಸುಬ್ರಹ್ಮಣ್ಯ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೊಡಿಗೆ ಗ್ರಾಮದ ನಾಗಪ್ಪ ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ಮನೆಗೊಂದು ನೂತನ ಪುಸ್ತಕಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಓದುವ ಮೂಲಕ ಮನುಷ್ಯನ ಮನಸ್ಸು ಪ್ರಫಲ್ಲಾಗೊಂಡು ದ್ವೇಷ ಮುಕ್ತವಾಗಿ, ಭಾಷೆಗಳ ನಡುವಿನ ವೈಷಮ್ಯ ನಾಶ ಪಡಿಸುತ್ತದೆ. ಕಾದಂಬರಿಗಳು ಚಲನಚಿತ್ರ ವಾದಾಗ ಕಾದಂಬರಿಯ ಮಹತ್ವ ಕಳೆದುಕೊಳ್ಳುತ್ತದೆ. ಪ್ರತಿಯೊಂದು ಕಾದಂಬರಿಯಲ್ಲಿನ ಸೊಗಸು, ವರ್ಣನೆಯೂ ಅದರ ಪ್ರತಿ ಪುಟದಲ್ಲಿ ಅಡಕವಾಗಿರುತ್ತದೆ. ಅದನ್ನು ಚಲನಚಿತ್ರದ ದೃಶ್ಯಗಳಲ್ಲಿ ಹಿಡಿಯಲು ಸಾಧ್ಯವಿಲ್ಲ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದಾಗ ಸಿಗುವ ಅನುಭೂತಿ ಎಷ್ಟೇ ಗಂಟೆ ಪ್ರಯತ್ನಿಸಿದರೂ ದೃಶ್ಯ ಮಾಧ್ಯಮದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ನಾಯಿ ನೆರಳು, ದ್ವೀಪ ದಂತಹ ಅನೇಕ ಚಲನಚಿತ್ರಗಳನ್ನು ನೋಡಿದವರಿಗೆ, ಕಾದಂಬರಿಯ ಸೊಗಸಿನ ಅರಿವೇ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಕೃಷಿ ಅಧಿಕಾರಿ ಮಹಾಬಲಗೌಡ ಮಾತನಾಡಿ, ಪುಸ್ತಕಗಳ ಮಹತ್ವ ಅರಿತವರು ಮಾತ್ರವೇ ತಮ್ಮ ಮನೆಗಳಿಲ್ಲಿ ಪುಟ್ಟ ಗ್ರಂಥಾಲಯ ಇರಲಿ ಎಂಬ ಮನಸ್ಸು ಮಾಡುತ್ತಾರೆ. ರಾಜ್ಯದ ಪ್ರತಿ ಮನೆಗಳಲ್ಲಿ ಸಣ್ಣ ಗ್ರಂಥಾಲಯ ಇರಬೇಕು ಎಂಬ ಸರಕಾರದ ಪ್ರಯತ್ನ ಶ್ಲಾಘನೀಯ. ಆದರೆ, ಗ್ರಾಮ ಪಂಚಾಯಿತಿ ಮತ್ತು ತಾಲೂಕಿನ ಗ್ರಂಥಾಲಯ ಓದುಗರಿಲ್ಲದೆ ಮುಚ್ಚುವ ಸ್ಥಿತಿ ತಲುಪುತ್ತಿರುವುದು ದುರದೃಷ್ಟಕರ. ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಕಮ್ಮಿ ಆಗುತ್ತಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ ಮೂರ್ತಿ ಮಾತನಾಡಿ, ಒಂದು ಗ್ರಂಥಾಲಯದಲ್ಲಿ ಗಾಂಧಿಜೀ ಅವರ ಪುಸ್ತಕ ಮಾತ್ರ ಇದ್ದರೆ ಸಾಲದು. ಅದು ಪರಿಪೂರ್ಣತೆ ಇರುವುದಿಲ್ಲ. ಗೂಡ್ಸೆ ಪುಸ್ತಕ ಇದ್ದಾಗ ಮಾತ್ರವೇ ಪೂರ್ಣ ಜ್ಞಾನ ಲಭ್ಯವಾಗಲು ಸಾಧ್ಯ. ಯಾವುದೇ ಒಂದು ವಿಷಯದ ಬಗ್ಗೆ ಮಾತನಾಡುವ ವ್ಯಕ್ತಿ ಅದಕ್ಕೆ ಸಂಬಂಧಿಸಿದ ಪರ-ವಿರೋಧದ ಎರಡು ಪುಸ್ತಕವನ್ನು ಓದಬೇಕು. ಈ ರೀತಿ ಓದಿದ ಪುಸ್ತಕಗಳು ಮನೆಯಲ್ಲಿ ಸಂಗ್ರಹವಾದಾಗ ಮಾತ್ರವೇ ನಮ್ಮ ಆಲೋಚನೆ, ವಿಚಾರ, ಸತ್ಯ ಮತ್ತು ಸ್ಪಷ್ಟವಾಗಿ ಮಾತನಾಡಿ ಅನುಷ್ಠಾನಕ್ಕೆ ತರಲು ಸಹಕಾರಿ ಆಗಲಿದೆ ಎಂದರು.

ಪರಿಸರಾಸಕ್ತ ಹನಿಯ ರವಿ, ನೂತನ ಗ್ರಂಥಾಲಯಕ್ಕೆ ಹತ್ತಾರು ಪುಸ್ತಕಗಳನ್ನು ಉಡುಗೊರೆ ನೀಡಿ ಪ್ರೋತ್ಸಾಹ ನೀಡಿದರು.

ವಕೀಲ ರಾಮಪ್ಪ, ಜಿ. ಎನ್. ಬಸಪ್ಪ ಗೌಡ, ಡಿ.ಎಸ್. ರಾಘವೇಂದ್ರ, ವಿಶ್ವೇಶ್ವರ ಗೌಡ, ರಮಾ,ನವೀನ್ ಕುಮಾರ್, ಕಸಾಪ ಕಾರ್ಯದರ್ಶ ಕೆ. ಜಿ. ನಾಗೇಶ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಅಶ್ವಿನಿ ಪಂಡಿತ್ ನಿರೂಪಿಸಿದರು. ಸುಜಾತ ಪ್ರಾರ್ಥಿಸಿದರು. ಶಿವಾನಂದಪ್ಪ ಸ್ವಾಗತಿಸಿ, ಶುಭ ದಿನೇಶ್ ವಂದಿಸಿದರು.

Leave a Comment