ನಿವೇಶನ ರಹಿತ ಫಲಾನುಭವಿಗಳಿಗೆ ವಿತರಿಸಲಾದ ಸರ್ಕಾರಿ ಜಾಗ ಖಾಸಗಿ ಪ್ರತಿಷ್ಟಿತ ವ್ಯಕ್ತಿ ಪಾಲು ! ಒತ್ತುವರಿ ತೆರವುಗೊಳಿಸುವಂತೆ ಕಂದಾಯ ಸಚಿವರಿಂದ ಆದೇಶ
ರಿಪ್ಪನ್ಪೇಟೆ: ರಿಪ್ಪನ್ಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂ 260/2 ಅಂದಿನ ಸರ್ಕಾರ ನಿವೇಶನ ರಹಿತ ಆರ್ಥಿಕವಾಗಿ ದುರ್ಬಲರಾಗಿದ್ದ ಬಡ 23 ಫಲಾನುಭವಿಗಳಿಗೆ ವಿತರಿಸಲಾದ ಜಾಗವನ್ನು ಖಾಸಗಿ ಪ್ರತಿಷ್ಟಿತ ವ್ಯಕ್ತಿಯೊಬ್ಬರು ಒತ್ತುವರಿ ಹೆಸರಿನಲ್ಲಿ ಕಬಳಿಸಿ ಮಾರಾಟ ಮಾಡಿದ್ದಾರೆಂಬ ಬಗ್ಗೆ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ನೀಡಲಾದ ದೂರಿನನ್ವಯ ಸಚಿವರು ಕೂಡಲೇ ತೆರವುಗೊಳಿಸಿ ಫಲಾನುಭವಿಗಳಿಗೆ ನೀಡುವಂತೆ ಆದೇಶಿಸಲಾದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
1991ರ ಅ. 27ರಂದು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸನಗರ ತಾಲ್ಲೂಕು ನಿವೇಶನ ಹಂಚಿಕೆ ಸಲಹಾ ಸಮಿತಿಯ ನಡವಳಿಕೆಯಂತೆ ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೇ ನಂ 260/2 ರಲ್ಲಿ 23 ರಲ್ಲಿ ನಿವೇಶನ ರಹಿತ ಅರ್ಥಿಕವಾಗಿ ದುರ್ಬಲರಾಗಿದ್ದ ಬಡ 23 ಫಲಾನುಭವಿಗಳಿಗೆ ಆಯ್ಕೆ ಮಾಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾದ ನಿವೇಶಗಳ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಳ್ಳುವುದರೊಂದಿಗೆ ಸರ್ಕಾರಿ ಜಾಗವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿರುತ್ತಾರೆಂಬ ಮಾಹಿತಿಯು ಬಹಿರಂಗಗೊಂಡು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ನಿವೇಶನ ರಹಿತ ಫಲಾನುಭವಿಗಳಿಗೆ ವಿತರಣೆಗಾಗಿ ಅಂದಿನ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಆದೇಶದಂತೆ ಗವಟೂರು ಗ್ರಾಮದ ಸರ್ವೇ ನಂ 260/2 ರಲ್ಲಿ ಸರ್ವೇ ಸ್ಕೆಚ್ ಮಾಡುವುದರೊಂದಿಗೆ ನಿವೇಶನದ ನೀಲ ನಕ್ಷೆಯನ್ನು (ವಿಂಗಡಣೆಯನ್ನು) ಮಾಡುವ ಮೂಲಕ ರಸ್ತೆ ಚರಂಡಿ ಹೀಗೆ ಮಾಡಲಾಗಿದ್ದರೂ ಕೂಡಾ ಯಾವುದನ್ನು ಲೆಕ್ಕಿಸದೇ ಖಾಸಗಿ ಪ್ರತಿಷ್ಟಿತ ವ್ಯಕ್ತಿ ಜಮೀನು ಒತ್ತುವರಿ ಮಾಡಿ ಸರ್ಕಾರಿ ಜಾಗವನ್ನು ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡಿದ್ದಾರೆಂದು ಫಲಾನುಭವಿಗಳು ಆರೋಪಿಸಿ ರಾಜ್ಯ ಕಂದಾಯ ಸಚಿವರಿಗೆ ಮತ್ತು ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲಾದ ದೂರಿನನ್ವಯ ಸಚಿವರು ತಕ್ಷಣ ಕಾರ್ಯಪ್ರವೃತ್ತರಾಗಿ ತೆರವುಗೊಳಿಸಿ ಫಲಾನುಭವಿಗಳಿಗೆ ಜಾಗ ವಿತರಿಸುವಂತೆ ಸೂಚಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಾಗರ ಉಪವಿಭಾಗಾಧಿಕಾರಿಗಳಿಗೆ ಪತ್ರ ಮೂಲಕ ಸೂಚಿಸಿದ ಮೇರೆಗೆ ಅವರು ಗ್ರಾಮ ಪಂಚಾಯ್ತಿಯವರಿಗೆ ಒತ್ತುವರಿ ಮಾಡಲಾದ ನಿವೇಶನ ಜಾಗವನ್ನು ತೆರವುಗೊಳಿಸಿ ಆಯ್ಕೆಯಾದ 23 ಫಲಾನುಭವಿಗಳಿಗೆ ವಿತರಣೆಗೆ ಆದೇಶಿಸಲಾದರೂ ಕೂಡಾ ಗ್ರಾಮಾಡಳಿತ ವಿಳಂಬ ಧೋರಣೆ ತಾಳಿದೆೆ ಎಂದು ಫಲಾನುಭವಿಗಳು ತಮ್ಮ ಆಕ್ರೋಶವನ್ನು ಮಾಧ್ಯಮದವರಲ್ಲಿ ವ್ಯಕ್ತಪಡಿಸಿದ್ದಾರೆ.