ರಿಪ್ಪನ್ಪೇಟೆ : ಉತ್ತಮ ಭತ್ತದ ಬೀಜಗಳ ಆಯ್ಕೆ ಮಾಡಿದರೆ ಮಾತ್ರ ಅಧಿಕ ಇಳುವರಿ ತೆಗೆಯಲು ಸಾಧ್ಯ ಎಂದು ಹುಂಚ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ರವಿ ಕುಮಾರ್ ಹೇಳಿದರು.
ಅವರು ಕೋಡೂರು ಗ್ರಾಮದಲ್ಲಿ ನಡೆದ ಸುರಕ್ಷಿತ ಕೀಟನಾಶಕಗಳ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ತಮ್ಮಲ್ಲಿರುವ ಭತ್ತದ ಬೀಜಗಳನ್ನು ಬಿತ್ತನೆಗೆ ಬಳಸುವ ಮೊದಲು ಉಪ್ಪು ನೀರು ದ್ರಾವಣ ತಯಾರಿಸಿ ಜೊಳ್ಳು ಭತ್ತವನ್ನು ತೆಗೆದು ಗಟ್ಟಿ ಹಾಗೂ ಬಲಿತ ಭತ್ತದ ಬೀಜಗಳನ್ನು ಬಿತ್ತನೆಗೆ ಆಯ್ಕೆ ಮಾಡಬೇಕು. ಜೊತೆಗೆ ಬೀಜದಿಂದ ಹರಡುವ ರೋಗ ಮತ್ತು ಕೀಟಗಳ ಹತೋಟಿಗೆ ಬೀಜೋಪಚಾರವನ್ನು ಸಾವಯವ, ಜೀವಾಣು ಹಾಗೂ ರೋಗನಾಶಕಗಳನ್ನು ಬಳಸಿ ಬೀಜ ಉಪಚಾರ, ಸಸಿ ಉಪಚಾರ ಮಾಡಿ ನಾಟಿ ಮಾಡಬೇಕು ಮತ್ತು ರೋಗ ಹಾಗೂ ಕೀಟನಾಶಕಗಳ ಬಳಕೆ ಸಂದರ್ಭದಲ್ಲಿ ವಹಿಸಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ಕುಸುಗುಂಡಿ ಮಾತನಾಡಿ, ಭತ್ತದಲ್ಲಿ ಯಂತ್ರ ನಾಟಿ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಬೀಜಗಳ ಆಯ್ಕೆ, ಸಸಿ ಮಡಿ (ಮ್ಯಾಟ್) ತಯಾರಿಕೆ ಹಾಗೂ ನಾಟಿ ಯಂತ್ರದ ಕುರಿತು ತಾಂತ್ರಿಕ ಸಲಹೆಯನ್ನು ರೈತರಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೋಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್, ಧಗ್ರಾಯೋ ಕೋಡೂರು ವಲಯ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ, ಧಗ್ರಾಯೋ ಕೃಷಿ ಮೇಲ್ವಿಚಾರಕರ ಮಂಜುನಾಥ್, ಕೃಷಿ ಸಖಿ ಮಾಲತಿ ಸಂತೋಷ್, ಸಂಗೀತ, ಯಂತ್ರ ನಾಟಿ ಮಾಡುವ ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





