ರಸ್ತೆ ಬದಿ ಬೋಂಡಾ, ಚುರುಮುರಿ ಮಾರುವ ವ್ಯಕ್ತಿಯಿಂದ ಬಿಜೆಪಿ ಅಭ್ಯರ್ಥಿಗೆ ₹ 25 ಸಾವಿರ ದೇಣಿಗೆ
ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿ ಎಂದೇ ಹೇಳಲಾಗುವ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹಣವಿಲ್ಲದೆ ರಾಜಕೀಯ ಮಾಡುತ್ತಾರೆ ಎನ್ನಲಾಗುತ್ತದೆ. ಇಂತಹ ವ್ಯಕ್ತಿಗೆ ಕಾರ್ಯಕರ್ತರೇ ಹಣ ನೀಡಿ ಚುನಾವಣೆ ಖರ್ಚು ಭರಿಸಲು ನೆರವಾಗುತ್ತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ಮತದಾರರಿಂದ ಸಿಗುತ್ತಿದ್ದು ಕಾರ್ಯಕರ್ತರು ಇದರಿಂದ ಉತ್ಸಾಹಗೊಂಡಿದ್ದಾರೆ. ಈ ನಡುವೆ ಕಾರ್ಯಕರ್ತರೊಬ್ಬರು 25 ಸಾವಿರ ರೂ. ಹಣವನ್ನು ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಾದ ಲೋಕೇಶ್ ಮೂಲತಃ ತೇಗೂರು ನಿವಾಸಿಯಾಗಿದ್ದು ರಸ್ತೆ ಬದಿಯಲ್ಲಿ ತಳ್ಳು ಗಾಡಿಯಲ್ಲಿ ಚುರುಮುರಿ, ಬೋಂಡಾ ವ್ಯಾಪಾರ ಮಾಡುತ್ತಾರೆ. ಇದರಲ್ಲಿ ಬಂದ ಲಾಭದಲ್ಲಿ 25 ಸಾವಿರ ರೂ.ಗಳನ್ನು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ್ದಾರೆ.
ತಾನು ದುಡಿದ ವ್ಯಾಪಾರ ಹಣದಲ್ಲಿ ದೇಣಿಗೆ ನೀಡುವ ಮೂಲಕ ಸಜ್ಜನ ವ್ಯಕ್ತಿಗೆ ನೆರವಾಗಿದ್ದಾರೆ.