ರಿಪ್ಪನ್ಪೇಟೆ : ಗವಟೂರು ತಾವರೆಕೆರೆ ಹೂಳೆತ್ತುವ ಕಾಮಗಾರಿಗೆ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ 40 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಳೆದ ಒಂದೆರಡು ತಿಂಗಳ ಹಿಂದೆ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ ಕೂಡಾ ಕಾಮಗಾರಿ ಅರೆ-ಬರೆಯಾಗಿ ಅಪೂರ್ಣವಾಗಿಯೇ ಸಾಗಿದೆ ಎಂದು ಸಾರ್ವಜನಿಕರು ದೂರುವಂತಾಗಿದೆ.
ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರನಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ ಶಾಸಕರು, ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾದರೂ ಗುತ್ತಿಗೆದಾರ 40 ಲಕ್ಷ ರೂ. ಕಾಮಗಾರಿಯನ್ನು ಅರೆಬರೆಯಾಗಿ ಮುಗಿಸಿದ್ದಾನೆನ್ನಲಾಗಿದೆ.

ಪ್ಲಾನ್ ಅಂಡ್ ಎಸ್ಟಿಮೆಂಟ್ನಂತೆ ತಾವರೆಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆರೆಯ ಸುತ್ತ ಹೂಳು ಎತ್ತಿ ದಂಡೆಗೆ ಹಾಕಲಾಗಿ ಹೊಸನಗರ-ಶಿವಮೊಗ್ಗ ಸಂಪರ್ಕದ ರಾಜ್ಯ ಹೆದ್ದಾರಿಯಂಚಿನಲ್ಲಿ ಸೈಡ್ ಮೆಟ್ಲಿಂಗ್ (ಗೋಡೆ) ನಿರ್ಮಿಸಿರುವುದನ್ನು ಬಿಟ್ಟರೆ ಉಳಿದಂತೆ ಕೆರೆಯ ಮಧ್ಯದಲ್ಲಿ ಹೂಳು ತೆಗೆಯದೆ ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರಲ್ಲಿ ಹಲವು ಸಂಶಯಕ್ಕೆ ಎಡೆಮಾಡಿದಂತಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಂತೆ ಕಾಣುತ್ತಿದೆ.
ಹೂಳೆತ್ತುವ ಕಾಮಗಾರಿಯಲ್ಲಿ ಕೆರೆಯ ಸುತ್ತ ಹೂಳು ತೆಗೆದಿರುವುದು ಮತ್ತು ಮಧ್ಯದಲ್ಲಿ ಹೂಳು ತುಂಬಿಕೊಂಡಿರುವುದು ಕಂಡು ಸಾರ್ವಜನಿಕರು ಅಪಹಾಸ್ಯ ಮಾಡುವ ಮೂಲಕ 40 ಲಕ್ಷ ರೂ. ಕಾಮಗಾರಿ ಇಷ್ಟೇನಾ ಎನ್ನುವಂತೆ ಹೋಟೆಲ್ ಅಂಗಡಿ ಕಟ್ಟೆಯಲ್ಲಿ ಕುಳಿತು ಮಾತನಾಡುವ ವಿಷಯವನ್ನಾಗಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಕೆರೆ ಹೂಳೆತ್ತುವ ಕಾಮಗಾರಿ ಸಾರ್ವಜನಿಕರಲ್ಲಿ ಚರ್ಚಿತ ವಿಷಯವಾಗಿ ಕಾಮಗಾರಿಯಲ್ಲಿ ಭಾರಿ ಗೋಲ್ಮಾಲ್ ನಡೆದಂತಾಗಿದೆ ಎಂಬ ವಿಷಯ ಸುದ್ದಿಗೆ ಗ್ರಾಸವಾಗಿದೆ.

ಇನ್ನಾದರೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ 40 ಲಕ್ಷ ರೂ. ಕಾಮಗಾರಿ ಪೂರ್ಣವಾಗಿದೆಯೇ? ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವರೆ ಕಾದು ನೋಡಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





