ಹೊಸನಗರ : “ಪ್ರತಿಯೋರ್ವರೂ ತಮ್ಮ ತಂದೆ-ತಾಯಿ-ಪೋಷಕರ ಆರೈಕೆಯಲ್ಲಿ ಬೆಳೆದರೂ ವಿದ್ಯಾರ್ಜನೆ ಸಂದರ್ಭಗಳಲ್ಲಿ ಗುರುಗಳ ಪಾಠ-ಪ್ರವಚನ-ಹಿತನುಡಿಗಳು ಜೀವನದುದ್ದಕ್ಕೂ ಬೆಳಕು ನೀಡಬಲ್ಲವು” ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಗುರುಪೂರ್ಣಿಮೆಯಂದು ತಿಳಿಸಿದರು.

“ಜೈನ ಧರ್ಮದಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಭಗವಾನ್ ಮಹಾವೀರರ ಸಮವಸರಣಕ್ಕೆ ಇಂದ್ರಭೂತಿ ಗೌತಮರು ಆಗಮಿಸಿ, ಅವರ ಶಿಷ್ಯತ್ವವನ್ನು ಸ್ವೀಕರಿಸಿದ ಪವಿತ್ರ ದಿನವೇ ಗುರುಪೂರ್ಣಿಮೆ. ಇದೇ ದಿನ ಭಗವಾನ್ ಮಹಾವೀರರ ದಿವ್ಯಧ್ವನಿಯನ್ನು ಗ್ರಹಿಸಿ, ಅದನ್ನು ಲೋಕಕ್ಕೆ ಸಂರಕ್ಷಿಸಿ ಪ್ರಸಾರ ಮಾಡುವ ಜವಾಬ್ದಾರಿಯೊಂದಿಗೆ ಮೊದಲ ಗಣಧರರಾಗಿ (ಗಣಧರ ಪದವಿಯನ್ನು) ಸ್ವೀಕರಿಸಿದರು. ಆದ್ದರಿಂದ ಈ ಪವಿತ್ರ ದಿನವನ್ನು ಜೈನ ಸಂಪ್ರದಾಯದಲ್ಲಿ ‘ಗುರುಪೂರ್ಣಿಮೆ’ ಎಂದು ಭಕ್ತಿಭಾವದಿಂದ ಆಚರಿಸಲಾಗುತ್ತದೆ” ಎಂದರು.

‘ಜ್ಞಾನ ವಿಕಸನಕ್ಕಾಗಿ ಗುರುಶ್ರೀಗಳಿಂದ ಸತ್ಯದರ್ಶನ ಶತಃಸಿದ್ಧ’ ಎನ್ನುತ್ತಾ ‘ಶೈಕ್ಷಣಿಕ ಅಭ್ಯುದಯಕ್ಕೆ ಪ್ರಾಚಾರ್ಯ-ಶಿಕ್ಷಕ-ಶಿಕ್ಷಕಿಯರು ವ್ಯಕ್ತಿತ್ವ ರೂಪಿಸಬಲ್ಲವರಾಗಿದ್ದಾರೆ. ಅವರೆಲ್ಲರೂ ಪ್ರಾತಃಸ್ಮರಣೀಯ’ ಎಂದು ಶ್ರೀಗಳವರು ಅನುಗ್ರಹ ಪ್ರವಚನದಲ್ಲಿ ಆಶಿಸಿದರು.
ಅಧಿನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ, ಅಭೀಷ್ಠಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಭಕ್ತವೃಂದದವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪೂಜಾ ವಿಧಿಯಲ್ಲಿ ಭಾಗಿಯಾದರು. ಶ್ರೀಮಠದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಮಂದಿರದಲ್ಲಿ ನಿತ್ಯ ಪೂಜೆ ನೆರವೇರಿತು.

ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಆಗಮೋಕ್ತ ಪೂಜಾ ವಿಧಿಯಲ್ಲಿ ಭಕ್ತರು ಪಾಲ್ಗೊಂಡು ಧನ್ಯರಾದರು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹುಂಚ ಶ್ರೀ ಪದ್ಮಾವತಿ ಮಹಿಳಾ ಮಂಡಲದ ಸದಸ್ಯೆಯರು ಊರ-ಪರವೂರ ಭಕ್ತರು ಶ್ರೀಗಳವರಿಂದ ಶ್ರೀಫಲ ಮಂತ್ರಾಕ್ಷತೆ ಸ್ವೀಕರಿಸಿದರು.