ತೀರ್ಥಹಳ್ಳಿ: ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಟಗಾರು ಸರ್ಕಾರಿ ಶಾಲೆಯ ಶಿಕ್ಷಕಿ ರತ್ನಕುಮಾರಿ ಅವರು ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ತೀರ್ಥಹಳ್ಳಿ ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಗ್ರಾಮೀಣ ಪ್ರದೇಶದ ಒಂದು ಶಾಲೆಯನ್ನು ಪರಿಸರ ಸ್ನೇಹಿ, ಶಿಕ್ಷಣ ಸ್ನೇಹಿ, ಸಾಹಿತ್ಯ ಸ್ನೇಹಿ, ಜನ ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿ ಮಾದರಿ ಶಾಲೆಯನ್ನಾಗಿ ಹೇಗೆ ರೂಪಿಸಬಹುದು ಎಂಬುದಕ್ಕೆ ಸಮಟಗಾರು ಶಾಲೆ ರಾಜ್ಯದಲ್ಲಿಯೇ ಉತ್ತಮ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಾಧನೆಯ ಹಿಂದೆ ರತ್ನಕುಮಾರಿ ಅವರ ಅಪಾರ ಕಾಳಜಿ, ಶ್ರದ್ಧೆ ಮತ್ತು ನಿರಂತರ ಶ್ರಮ ಇದೆ. ಕಳೆದ ಎಂಟು ವರ್ಷಗಳಿಂದ ಅವರ ಕೆಲಸವನ್ನು ನಾನು ಗಮನಿಸುತ್ತಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ರತ್ನಕುಮಾರಿ ಅವರ ಅಪೇಕ್ಷೆಯಂತೆ ಕಳೆದ ಎಂಟು ವರ್ಷಗಳಲ್ಲಿ ಸಮಟಗಾರು ಶಾಲೆಗೆ ಮೂರು ನೂತನ ಕೊಠಡಿಗಳನ್ನು ಮಂಜೂರು ಮಾಡಿಸುವ ಜೊತೆಗೆ, ಶಾಲೆಯ ವಿವಿಧ ಅಗತ್ಯತೆಗಳಿಗೆ ಅನುದಾನ ಒದಗಿಸುವ ಕೆಲಸ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯಲ್ಲಿ ನಡೆದ ಅನೇಕ ಕಾರ್ಯಕ್ರಮಗಳಿಗೆ ಭಾಗವಹಿಸಿ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರೊಂದಿಗೆ ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ಭಾಗಿಯಾದ ಸಂತೋಷ ನನಗೂ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ದೇಶದಾದ್ಯಂತ ಆಯ್ಕೆಯಾದ 48 ಉತ್ತಮ ಶಿಕ್ಷಕರ ಪೈಕಿ ರಾಜ್ಯದಿಂದ ರತ್ನಕುಮಾರಿ ಅವರು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ತೀರ್ಥಹಳ್ಳಿ ಕ್ಷೇತ್ರದ ಶೈಕ್ಷಣಿಕ ಸಾಧನೆಗೆ ಇದು ಮತ್ತೊಂದು ಗರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರತ್ನಕುಮಾರಿ ಅವರಿಗೆ ದೊರೆತಿರುವ ಈ ರಾಷ್ಟ್ರೀಯ ಮನ್ನಣೆ ತೀರ್ಥಹಳ್ಳಿ ಕ್ಷೇತ್ರಕ್ಕೂ, ಶಿವಮೊಗ್ಗ ಜಿಲ್ಲೆಗೂ ಹೆಮ್ಮೆಯ ಸಂಗತಿ. ಅವರ ಸೇವೆ ಇನ್ನಷ್ಟು ಶಿಕ್ಷಕರಿಗೆ ಮಾದರಿಯಾಗಲಿ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿನಂದಿಸಿದ್ದಾರೆ.

