ರಿಪ್ಪನ್ಪೇಟೆ : ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 2023-24 ಮತ್ತು 24-25ನೇ ಸಾಲಿನ ಮಹಾತ್ವಾಕಾಂಕ್ಷಿ ಯೋಜನೆಯಡಿ ಅನುಮೋದಿಸಲ್ಪಟ ವೈಯಕ್ತಿಕ ಕಾಮಗಾರಿಗಳನ್ನು ಆರಂಭಿಸದಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದೇಶಿಸಿರುವುದು ಖಂಡನೀಯ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಈ ಆದೇಶವನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ರಿಪ್ಪನ್ಪೇಟೆಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ 2023-24 ಮತ್ತು 24-25ನೇ ಸಾಲಿನ ವೈಯಕ್ತಿಕ ಕ್ರಿಯಾ ಯೋಜನೆ ಅನುಮೋದನೆಗೊಂಡ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಲು ಅವಕಾಶ ಮಾಡಿಕೊಡಬೇಕು. ಕಾರಣ, ಮಲೆನಾಡಿನ ವ್ಯಾಪ್ತಿಯಲ್ಲಿ ಮಳೆಗಾಲ ಪ್ರಾರಂಭವಾದರೆ ಕಾಮಗಾರಿ ಮಾಡುವುದು ಕಷ್ಟಕರವಾಗಿದೆ. ಆ ಕಾರಣ ಜಿಲ್ಲಾ ಪಂಚಾಯ್ತಿ ಸಿಇಒ ಈಗಾಗಲೇ ತಡೆ ಹಿಡಿದಿರುವ ವೈಯಕ್ತಿಕ ಕಾಮಗಾರಿಗಳನ್ನು ಮುಂದುವರಿಸಲು ಆದೇಶ ಹೊರಡಿಸುವಂತೆ ಮನವಿ ಮೂಲಕ ಆಗ್ರಹಿಸಿದ್ದಾರೆ.