ನೇತ್ರಾವತಿ ನದಿಗೆ ಹಾರಿದ್ದ ಚಿಕ್ಕಮಗಳೂರಿನ ವ್ಯಕ್ತಿ ಶವ ಕೊನೆಗೂ ಪತ್ತೆ

0 436

ಚಿಕ್ಕಮಗಳೂರು : ಮಂಗಳೂರಿನ ಉಳ್ಳಾಲ ಸಮೀಪ ನೇತ್ರಾವತಿ ನದಿಗೆ ನಿನ್ನೆ ಮಧ್ಯಾಹ್ನ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಚಿಕ್ಕಮಗಳೂರು ಮೂಲದ ಪ್ರಸನ್ನಗೌಡ ಶವ ಘಟನೆ ನಡೆದು 24 ಗಂಟೆಗಳ ಬಳಿಕ ಕೊನೆಗೂ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನದಿಂದ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ನಿನ್ನೆ ಸಂಜೆ ಅದೇ ಸ್ಥಳದಲ್ಲಿ ಒಂದು ಶವ ಸಿಕ್ಕಿತ್ತು ಅದನ್ನು ಪ್ರಸನ್ನ ಗೌಡ ಶವ ಎಂದೇ ಭಾವಿಸಲಾಗಿತ್ತು. ಆದರೆ ಕುಟುಂಬ ಸದಸ್ಯರು ಪರಿಶೀಲಿಸಿದ ನಂತರ ಅದು ಬೇರೆ ಯಾರದ್ದೋ ಶವ ಎಂದು ತಿಳಿದುಬಂದಿತ್ತು.

ನಿರಂತರ ಹುಡುಕಾಟದ ನಂತರ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಸನ್ನಗೌಡ ಅವರ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರ ಸಹಾಯದಿಂದ ಶವವನ್ನು ಮೇಲಕ್ಕೆತ್ತಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹುಟ್ಟೂರು ಚಿಕ್ಕಮಗಳೂರು ಸಮೀಪದ ಬೈರಾಪುರ ಗ್ರಾಮಕ್ಕೆ ಮೃತದೇಹವನ್ನು ತರಲಾಗುತ್ತದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ  ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನ ಗೌಡ (35) ನಿನ್ನೆ ಮಧ್ಯಾಹ್ನ ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಸನ್ನ ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ತರಕಾರಿ, ಸೊಪ್ಪು ಹೋಲ್ ಸೇಲ್ ವ್ಯಾಪಾರ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ವ್ಯಾಪಾರದ ಹಣ ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಫೋಟೋ ಹಾಗೂ ಡಿ.ಎಲ್. ವಿಳಾಸದ ಗುರುತಿನ ಮೇಲೆ ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿತ್ತು.

ಪ್ರಸನ್ನ ಗೌಡ ಪತ್ನಿ, ಇಬ್ಬರು ಪುಟ್ಟ ಹೆಣ್ಣುಮಕ್ಕಳು, ತಂದೆ ತಾಯಿಯನ್ನು ಅಗಲಿದ್ದಾರೆ. ಪ್ರಸನ್ನ ಗೌಡರ ಸಾವಿನಿಂದ ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

2019 ರಲ್ಲಿ ಕಾಫಿ ಡೇ ಮಾಲೀಕರಾದ ವಿ.ಜಿ.ಸಿದ್ಧಾರ್ಥ್ ಹೆಗ್ಡೆಯವರು ನದಿಗೆ ಹಾರಿದ್ದ ಸ್ಥಳದಲ್ಲಿಯೇ ಇವರು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಸನ್ನ ಅವರು ನದಿಗೆ ಹಾರಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

12 ವರ್ಷಗಳಿಂದ ವ್ಯವಹಾರ

ಚಿಕ್ಕಮಗಳೂರಿನಲ್ಲಿ ಸುಮಾರು 12 ವರ್ಷಗಳಿಂದ ತರಕಾರಿ, ಕೊತ್ತಂಬರಿ ಸೊಪ್ಪು ವ್ಯವಹಾರ ಮಾಡುತ್ತಿದ್ದ ಪ್ರಸನ್ನ ಅ. 27ರಂದು ತನ್ನ ಸಹಾಯಕ ಸುಮನ್‌ ನೊಂದಿಗೆ ಮಂಗಳೂರಿಗೆ ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ತಂದು ಬಳಿಕ ನಗರದ ಹೊಟೇಲ್‌ನಲ್ಲಿ ತಂಗಿದ್ದರು. ಸೋಮವಾರ ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಿದ ಬಳಿಕ ಕಂಕನಾಡಿ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಿ ಹಣ ನೀಡಿ ಬಂದಿದ್ದರು. ಬಳಿಕ ಸುಮನ್‌ ಅವರನ್ನು ಅಲ್ಲೇ ನಿಲ್ಲುವಂತೆ ತಿಳಿಸಿ ಕಾರಿನಲ್ಲಿ ವಾಪಸ್‌ ನೇತ್ರಾವತಿ ಸೇತುವೆಯ ಬಳಿಗೆ ಬಂದು ನದಿಗೆ ಹಾರಿದ್ದಾರೆ.

ಪೈಪ್‌ ಮೂಲಕ ತೆರಳಿ ಆತ್ಮಹತ್ಯೆ

ಪ್ರಸನ್ನ ಮಂಗಳೂರಿನಿಂದ ಕಲ್ಲಾಪುವಿನವರೆಗೆ ಆಗಮಿಸಿ ಬಳಿಕ ಯೂ ಟರ್ನ್ ತೆಗೆದುಕೊಂಡು ವಾಪಸ್‌ ಮಂಗಳೂರು ಕಡೆ ಸಂಚರಿಸಿದ್ದು, ಸೇತುವೆ ಬಳಿ ಕಾರನ್ನು ನಿಲ್ಲಿಸಿ ಪರ್ಸ್‌, ಮೊಬೈಲ್‌ ಅನ್ನು ಕಾರಿನಲ್ಲೇ ಇಟ್ಟು ಸೇತುವೆಯ ಒಂದು ಬದಿಯಿಂದ ಪೈಪ್‌ ಮೂಲಕ ತೆರಳಿ ಅಲ್ಲಿಂದ ನದಿಗೆ ಹಾರಿದ್ದರೆನ್ನಲಾಗಿದೆ.

ಈ ಘಟನೆಯನ್ನು ಸ್ಥಳೀಯವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದು, ಹತ್ತಿರ ಬಂದಾಗ ನದಿಗೆ ಹಾರಿ ಮುಳುಗೇಳುತ್ತಿದ್ದರು. ನದಿಯಲ್ಲಿ ಮುಳುಗುತ್ತಿರುವ ದೃಶ್ಯವನ್ನು ಪ್ರಸನ್ನ ಅವರು ಬಂದಿದ್ದ ಕಾರು. ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆ ಸಂದರ್ಭ ಸ್ಥಳೀಯವಾಗಿ ಈಜುಗಾರರು ಇಲ್ಲದೆ ರಕ್ಷಣೆಗೆ ಸಾಧ್ಯವಾಗಿಲ್ಲ.

Leave A Reply

Your email address will not be published.

error: Content is protected !!