ಸಾಗರ :ರಾಜ್ಯದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿಯ ಘಟನೆ ಒಂದಾಗಿದೆ. ಈ ಬಾರಿ ಘಟನೆ ನಡೆದಿದೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಯುವಕ-ಯುವತಿ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ, ಮೂವರು ಆರೋಪಿಗಳು ಅವರನ್ನು ಅಡ್ಡಗಟ್ಟಿ ನಿಂದನೆ ಹಾಗೂ ಹಲ್ಲೆ ನಡೆಸಿದ ಘಟನೆ ಹೊರಬಿದ್ದಿದ್ದು, ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ.
ಜುಲೈ 7ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ, ಸಾಗರದ ಯಡವರಸೆ ರೈಲ್ವೆ ಗೇಟ್ ಬಳಿಯಲ್ಲಿ ಘಟನೆ ನಡೆದಿದೆ. ಸೊರಬ ತಾಲೂಕಿನ ಕಾನು ಕೇರಿ ಗ್ರಾಮದ 19 ವರ್ಷದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಬೈಕಿನಲ್ಲಿ ಸಾಗರದ ಶಾಹಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದಂತ ಮೂವರು ಅನ್ಯಕೋಮಿನ ಯುವಕರು ಬೈಕ್ನ್ನು ಅಡ್ಡಗಟ್ಟಿ, ಯುವಕನ ಜೊತೆಗೆ ಹೋಗುತ್ತಿರುವುದನ್ನು ಪ್ರಶ್ನಿಸುತ್ತಾ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಯುವತಿ ಕೈಬೆರಳು ತಿರುಗಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಬೈಕಿನಲ್ಲಿ ಇಬ್ಬರನ್ನೂ ಕೂರಿಸಿಕೊಂಡು, ಮೊದಲಿಗೆ ಎಲಗಡಲೆ ದರ್ಗಾ ಹಾಗೂ ನಂತರ ಸಾಗರದ ರಾಮನಗರ ಮಸೀದಿಗೆ ಕರೆದೊಯ್ದು, ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಸ್ಥಳೀಯರು ಮಾಹಿತಿ ನೀಡಿದಂತೆ, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ಯುವತಿಯ ದೂರಿನ ಹಿನ್ನೆಲೆ, ಎಸ್ ಎನ್ ನಗರದ ಶಬ್ಬೀರ್ (65), ಅರ್ಬಾಸ್ (24) ಮತ್ತು ಅಫ್ರಾಜ್ (25) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಪ್ರಗತಿಯಲ್ಲಿದೆ.

