ರಿಪ್ಪನ್ಪೇಟೆ ; ಕಾಡಿನಿಂದ ನಾಡಿನತ್ತ ಬಂದ ಜಿಂಕೆ ಮರಿಯೊಂದನ್ನು ನಾಯಿಗಳು ಬೆನ್ನಟ್ಟಿಕೊಂಡ ಬಂದ ಪರಿಣಾಮ ಜಿಂಕೆ ತಪ್ಪಿಸಿಕೊಂಡು ವಡಗೆರೆಯ ಮನೆಯೊಂದಕ್ಕೆ ನುಗ್ಗಿ ತನ್ನ ರಕ್ಷಣೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಅರಣ್ಯದಿಂದ ವಡಗೆರೆ ಗ್ರಾಮದ ಅಮರ್ನಾಥ ಕಾಮತ್ರವರ ತೋಟದ ಬಳಿ ಬಂದ ಜಿಂಕೆ ಮರಿಯನ್ನು ಕಂಡು ಬೀದಿನಾಯಿಗಳು ಬೆನ್ನಟ್ಟಿವೆ. ಆ ವೇಳೆ ನಾಯಿಗಳಿಂದ ಪ್ರಾಣ ರಕ್ಷಣೆಗೆ ಜಿಂಕೆ ಮರಿ ಶಿವಾನಂದ ಎಂಬುವರ ಮನೆಯ ಜಗುಲಿಯಲ್ಲಿ ಆಶ್ರಯ ಪಡೆದಿದ್ದು ಈ ಸಂದರ್ಭದಲ್ಲಿ ಸ್ಥಳೀಯರು ಅರಣ್ಯ ಸಂಚಾರಿ ದಳ ಸಾಗರ ವಿಭಾಗದ ಪಿಎಸ್ಐ ವಿನಾಯಕರವರಿಗೆ ಮಾಹಿತಿ ತಲುಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್ಐ ವಿನಾಯಕ ಹಾಗೂ ಸಿಬ್ಬಂದಿಗಳ ತಂಡ ಬೀದಿನಾಯಿಗಳ ದಾಳಿಯಿಂದ ಗಾಬರಿಗೊಂಡಿದ್ದ ಜಿಂಕೆ ಮರಿಯನ್ನು ಉಪಚರಿಸಿ ಅರಸಾಳು ವಲಯ ಆರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.