ಶಿವಮೊಗ್ಗ : ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣದ ಆರೋಪಿ ಮಧು ಕಾಲಿ ಪೊಲೀಸರು ಫೈರಿಂಗ್ ಮಾಡಿದ ಘಟನೆ ಶಿವಮೊಗ್ಗ ತಾಲ್ಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್ ಪ್ರದೇಶದಲ್ಲಿ ನಡೆದಿದೆ.
ಸ್ಥಳ ಮಹಜರಿಗೆ ಕರೆದೊಯ್ಯುತ್ತಿರುವಾಗ ಕೋಟೆ ಠಾಣೆಯ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ನಡೆಸಿದ್ದಾನೆ. ಈ ವೇಳೆ ಶಾಂತಿಯುತವಾಗಿ ನಿರ್ವಹಿಸಲು ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಮಧುವಿಗೆ ವಾರ್ನಿಂಗ್ ನೀಡಿದರು. ಏರ್ ಫೈರ್ ಮೂಲಕ ಎಚ್ಚರಿಕೆ ನೀಡಿದರೂ ಮಧು ಹಲ್ಲೆ ನಿಲ್ಲಿಸದೆ ಮುಂದುವರಿಸಿದ ಕಾರಣ, ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಅವರು ಅವನ ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಮಧು ಮತ್ತು ಪೊಲೀಸ್ ಸಿಬ್ಬಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಎಸ್ಪಿ ಬಿ. ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಯನ್ನು ಪರಿಶೀಲಿಸಿದರು.
ಈ ಪ್ರಕರಣ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಈ ಘಟನೆಗೆ ಮುನ್ನ, ಎರಡು ದಿನಗಳ ಹಿಂದೆ ಶಿವಮೊಗ್ಗದ ಗಾಂಧಿ ಬಜಾರ್ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹನ ಕೊಲೆ ನಡೆದಿದೆ. ಈ ಕೊಲೆ ಸಂಬಂಧಿಸಿದಂತೆ ಶನಿವಾರ ಮಧು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಅನಿಲ್ (ಅಂಬು), ಮಧು, ಕಾರ್ತಿಕ್ (ಕತ್ತೆ ಕಾರ್ತಿಕ್), ಶಬರೀಶ್ ಮತ್ತು ರವಿ ಸೇರಿದ್ದಾರೆ.

