Featured

ಬಾಳ ಬೆಳಕಿನ ಕಿರಣಗಳನ್ನು ಸೃಷ್ಟಿಸಿದ ಸಾಧಕ ವ್ಯಕ್ತಿಗಳು ಸಾವಿತ್ರಿಬಾಯಿ ಫುಲೆ ಮತ್ತು ಲೂಯಿಸ್ ಬ್ರೈಲ್

ಬಾಳ ಬೆಳಕಿನ ಕಿರಣಗಳನ್ನು ಸೃಷ್ಟಿಸಿದ ಸಾಧಕ ವ್ಯಕ್ತಿತ್ವಗಳಾದ ಸಾವಿತ್ರಿಬಾಯಿ ಫುಲೆ ಮತ್ತು ಲೂಯಿಸ್ ಬ್ರೈಲ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಅದನ್ನು ಎಲ್ಲರಿಗೂ ನೆನಪಿಸುತ್ತಾ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜನವರಿ 3 ಮತ್ತು ಜನವರಿ 4 ಶೈಕ್ಷಣಿಕ ಕ್ಷೇತ್ರದ ಇಬ್ಬರು ಮಹಾನ್ ವ್ಯಕ್ತಿಗಳ ಜನುಮದಿನ. ಒಬ್ಬರು ಭಾರತದಲ್ಲಿ ಮಹಿಳಾ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಅಕ್ಷರದವ್ವ ಎಂದೇ ಹೆಸರಾದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಮತ್ತೊಬ್ಬರು ಇಡೀ ವಿಶ್ವದ ಕಣ್ಣು ಕಾಣದ ದಿವ್ಯಾಂಗ ಚೇತನರಿಗಾಗಿ ಬ್ರೈಲ್ ಲಿಪಿ ಕಂಡುಹಿಡಿದ ಲೂಯಿಸ್ ಬ್ರೈಲ್.

ಭಾರತದಂತಹ ದೇಶದಲ್ಲಿ ಬಹಳ ಹಿಂದಿನಿಂದಲೂ ಶಿಕ್ಷಣ ಎಂಬುದು ಕೇವಲ ಕೆಲವೇ ವರ್ಗ ಮತ್ತು ಸಮುದಾಯಗಳ ಆಸ್ತಿಯಾಗಿತ್ತು. ಸಾಮಾನ್ಯವಾಗಿ ಸಮಾಜದ ಮೇಲ್ವರ್ಗದವರು, ಅದರಲ್ಲೂ ಪುರುಷರು ಮಾತ್ರ ಶಿಕ್ಷಣವನ್ನು ಪಡೆಯುತ್ತಿದ್ದರು. ಬಹುತೇಕ ಭಾರತದಲ್ಲಿ ಗುರುಕುಲ ಶಿಕ್ಷಣವೇ ಚಾಲ್ತಿಯಲ್ಲಿತ್ತು. ಆದರೆ ಕ್ರಮೇಣವಾಗಿ ಅದು ಇತರ ಸಮುದಾಯಗಳಿಗೆ ಹರಡಿ ಸ್ವಾತಂತ್ರ ನಂತರ ಎಲ್ಲರಿಗೂ ಶಿಕ್ಷಣ ದೊರೆಯುವಂತಾಯಿತು. ಮಹಿಳೆಯರು ಮೊದಲಿನಿಂದಲೂ ಸಾಮಾನ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದರು. ಶಾಲೆಗೆ ಅವರು ಹೋಗುತ್ತಲೇ ಇರಲಿಲ್ಲ. ಅಂತಹ ಸಮಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಮೊದಲ ಶಿಕ್ಷಕಿಯಾಗಿದ್ದಲ್ಲದೆ, ಮಹಿಳೆಯರ ಶಿಕ್ಷಣಕ್ಕಾಗಿ ಸಾಕಷ್ಟು ತ್ಯಾಗ, ಶ್ರಮಪಡುತ್ತಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ತಮ್ಮ ಪತಿ ಜ್ಯೋತಿರಾವ್ ಫುಲೆ ಅಥವಾ ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಮಹಿಳಾ ಶಿಕ್ಷಣಕ್ಕಾಗಿ ಶಾಲೆ ತೆರೆದು, ಅವರಿಗೆ ವಿದ್ಯಾಭ್ಯಾಸವನ್ನು ಮಾಡಿಸುತ್ತಾರೆ. ನಿಜಕ್ಕೂ ಈ ಕ್ಷಣದಲ್ಲಿ ಆಗಿನ ಆ ಸಂದರ್ಭವನ್ನು ನೆನಪಿಸಿಕೊಂಡರೆ ತುಂಬಾ ಆಶ್ಚರ್ಯ ಮತ್ತು ಹೆಮ್ಮೆಯಾಗುತ್ತದೆ. ಏಕೆಂದರೆ ಆಗಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ರಕ್ಷಣೆಯೇ ಬಹುದೊಡ್ಡ ಸವಾಲಾಗಿದ್ದ ಸನ್ನಿವೇಶದಲ್ಲಿ ಅದನ್ನು ಸಾವಿತ್ರಿಬಾಯಿ ಫುಲೆ ಅವರು ನನಸಾಗಿಸಿದರು.

ಇಂದು ನಾನು ಕಂಡಂತೆ ಅನೇಕ ಶಾಲಾ ಕಾಲೇಜುಗಳಲ್ಲಿ ಪುರುಷರಿಗಿಂತ ಮಹಿಳೆಯರ ಹಾಜರಾತಿಯೇ ಹೆಚ್ಚಾಗಿರುತ್ತದೆ. ಅಂದರೆ ಮಹಿಳೆ ಶೈಕ್ಷಣಿಕವಾಗಿ ಮುಂದುವರೆಯಲು ಸಾವಿತ್ರಿಬಾಯಿ ಫುಲೆ ಅವರ ಅಪಾರ ದೂರದೃಷ್ಟಿ, ಸ್ವಾಭಿಮಾನ, ಸಾಹಸ ಪ್ರವೃತ್ತಿ, ಸಾಮಾಜಿಕ ಕಾಳಜಿಯ ಪ್ರಜ್ಞೆ ಕಾರಣವಾಯಿತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕಾಗಿ ಅವರಿಗೆ ದೇಶದ ಎಲ್ಲ ಸಮುದಾಯಗಳು ತುಂಬು ಹೃದಯದ ಧನ್ಯವಾದಗಳನ್ನು ಹೇಳಬೇಕು. ಏಕೆಂದರೆ ಮಹಿಳೆಯರಿಗೆ ಶಿಕ್ಷಣ ಇಲ್ಲದಿದ್ದರೆ ಅವರ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆ, ಸಮಾನತೆ ಕನಸಿನ ಮಾತಾಗುತ್ತಿತ್ತು.

ನಮ್ಮ ದೇಶದ ಒಂದು ಮಾನಸಿಕ ಸಮಸ್ಯೆ ಎಂದರೆ ಇಲ್ಲಿ ನಿಜವಾಗಲೂ ತಮಗೆ ಉಪಕಾರ ಮಾಡಿರುವವರನ್ನು ಸ್ಮರಿಸುವವರು ತುಂಬಾ ಕಡಿಮೆ. ಅದಕ್ಕೆ ಬದಲಾಗಿ ಈ ಕ್ಷಣದ ಪ್ರಖ್ಯಾತರ, ಜನಪ್ರಿಯರ, ಸಿನಿಮಾ ನಟ ನಟಿಯರ ಆರಾಧನೆ ಮಾಡುವುದು ಹೆಚ್ಚು. ನಿಜವಾಗಲೂ ತಮ್ಮ ಸ್ವಾಭಿಮಾನ, ಸಮೃದ್ಧ ಬದುಕಿಗೆ ಕಾರಣವಾಗಿದ್ದ ಸಾವಿತ್ರಿಬಾಯಿ ಫುಲೆ ಅವರನ್ನು ನೆನಪಿಸಿಕೊಳ್ಳುವವರು ತುಂಬಾ ಕಡಿಮೆ. ಅಷ್ಟೇ ಏಕೆ ಮಾಧ್ಯಮಗಳು ಸಹ ಈ ಬಗ್ಗೆ ಹೆಚ್ಚು ಗಮನಹರಿಸದಿರುವುದು ದುರಂತ.

ಏನೇ ಆಗಲಿ ಭಾರತದಲ್ಲಿ ಮಹಿಳೆಯರ ಅಕ್ಷರ ಕ್ರಾಂತಿಗೆ ಕಾರಣೀಭೂತರಾದ ಸಾವಿತ್ರಿಬಾಯಿ
ಫುಲೆಯವರನ್ನು ಸ್ಮರಿಸುತ್ತಾ. ಹಾಗೆಯೇ ದೃಷ್ಟಿ ಹೀನ ವ್ಯಕ್ತಿಗಳು ಜೀವನದಲ್ಲಿ ಸಂಪೂರ್ಣ ಶಿಕ್ಷಣದಿಂದ ವಂಚಿತರಾಗಬಹುದಾಗಿದ್ದ ಸಾಧ್ಯತೆಯನ್ನು ಇಲ್ಲವಾಗಿಸಿ, ಅವರ ಬಾಳಿನಲ್ಲಿ ಬೆಳಕನ್ನು ಮೂಡಿಸಿ, ಅವರಿಗೆ ಪ್ರಪಂಚದ ಸಂಪೂರ್ಣ ಮಾಹಿತಿ ಸಿಗಲು ಒಂದು ಮಾಧ್ಯಮವಾಗಿ ಚುಕ್ಕಿಗಳ ಮೂಲಕ ಇಡೀ ಅಕ್ಷರಗಳ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಬ್ರೈಲ್ ಲಿಪಿಯನ್ನು ಕಂಡುಹಿಡಿದ ಮಹಾನ್ ಸಾಧಕ, ದಿವ್ಯಾಂಗ ಚೇತನಿ ಫ್ರಾನ್ಸ್ ನ ಲೂಯಿಸ್ ಬ್ರೈಲ್.

ಇಂದು ಜಗತ್ತಿನ ಎಲ್ಲಾ ದೃಷ್ಟಿರಹಿತ ದಿವ್ಯಾಂಗ ಚೇತನರು ಸಂಪೂರ್ಣ ಋಣಿಯಾಗಿರಬೇಕಾದದ್ದು ಈ ಲೂಯಿಸ್ ಬ್ರೈಲ್ ಅವರಿಗೆ. ಎಷ್ಟೋ ಜನ ವಿದ್ಯಾವಂತರಾಗಿ, ಬುದ್ಧಿವಂತರಾಗಿ, ಐಎಎಸ್, ಐಎಫ್ಎಸ್, ಐಪಿಎಸ್, ಕೆಎಎಸ್, ಪ್ರೊಫೆಸರ್, ಸೈಂಟಿಸ್ಟ್, ಬಿಸಿನೆಸ್ ಮ್ಯಾನ್ ಮುಂತಾದ ದೊಡ್ಡ ಹುದ್ದೆಗಳನ್ನು ಎಲ್ಲಾ ಜನಸಾಮಾನ್ಯರಂತೆ ಹೊಂದಲು ಸಾಧ್ಯವಾದ್ದು ಈ ಬ್ರೈಲ್ ಲಿಪಿಯ ಕಾರಣದಿಂದ.

ದೃಷ್ಟಿ ಇಲ್ಲದ ದಿವ್ಯಾಂಗ ಚೇತನರು ಮತ್ತು ಸಾಮಾನ್ಯ ಜನರ ಶೈಕ್ಷಣಿಕ ಅರ್ಹತೆಯಲ್ಲಿ ಅಂತಹ ದೊಡ್ಡ ವ್ಯತ್ಯಾಸ ಕಾಣದೆ ಅವರಿಗೂ ಸಮಾನ ಅವಕಾಶ ಸಿಗುವಂತೆ ಮಾಡಿದ ಮಹಾನ್ ಚೇತನ ಲೂಯಿಸ್ ಬ್ರೈಲ್. ತಾನು ಸಹಜವಾಗಿ ದೃಷ್ಟಿ ಸಹಿತವಾಗಿ ಜನಿಸಿದ ಲೂಯಿ ಬ್ರೈಲ್, ಕೆಲವೇ ವರ್ಷಗಳ ನಂತರ ಆಕಸ್ಮಿಕ ದುರ್ಘಟನೆಯಿಂದ ದೃಷ್ಟಿ ಕಳೆದುಕೊಂಡ ನಂತರ ತಾನು ವಿದ್ಯಾಭ್ಯಾಸ ಮುಂದುವರಿಸಲು ಕಠಿಣವಾದಾಗ ಈ ಬ್ರೈಲ್ ಲಿಪಿ ಅನ್ವೇಷಣೆ ಮಾಡುತ್ತಾರೆ.

ನೆಸೆಸಿಟಿ ಇಸ್ ದ ಮದರ್ ಆಫ್ ಆಲ್ ಇನ್ವೆಷನ್ ಅಂದರೆ ಅವಶ್ಯಕತೆಯೇ ಎಲ್ಲ ಸಂಶೋಧನೆಗಳ ತಾಯಿ ಬೇರು. ಅದರ ಆಧಾರದ ಮೇಲೆಯೇ ಬ್ರೈಲ್ ಲಿಪಿ ರೂಪುಗೊಂಡಿದೆ. ಇಂದು ಅವರನ್ನು ಸಹ ಜಗತ್ತು ಸ್ಮರಿಸಿಕೊಳ್ಳಬೇಕು.

ದುರಂತವೆಂದರೆ, ಇದನ್ನು ಸಹ ನಾವು ಮರೆಯುತ್ತಿದ್ದೇವೆ. ನಮಗೆ ಅನ್ನ ನೀಡಿದ, ನಮಗೆ ಅರಿವು ನೀಡಿದ, ನಮಗೆ ಬದುಕು ನೀಡಿದ ಜನರನ್ನು ಮರೆಯುತ್ತಾ, ಇಡೀ ನಮ್ಮ ಸಂಸ್ಕೃತಿಯ, ನಮ್ಮ ವಿವೇಚನೆಯ, ನಮ್ಮ ಕೃತಜ್ಞತೆಯ ಪರಂಪರೆಯನ್ನೇ ನಾವು ನಿರ್ಲಕ್ಷಿಸುತ್ತಿದ್ದೇವೆ. ಇದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.

ಕನಿಷ್ಠ ಸಾಮಾಜಿಕ ಜಾಲತಾಣಗಳ ಮೂಲಕವಾದರೂ ನಾವು ಈ ರೀತಿಯ ಸಾಧಕರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಾ, ಅದನ್ನು ನಮ್ಮ ಮುಂದಿನ ಪೀಳಿಗೆಗೆ ಅರಿವು ಮಾಡಿಸುತ್ತಾ, ಪರಿಚಯಿಸುತ್ತಾ ಸಾಗಿದಾಗ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಉಳಿಯಲು ಸಾಧ್ಯ. ಇಲ್ಲದಿದ್ದರೆ ಖಂಡಿತವಾಗಿ ಎಲ್ಲ ಮೌಲ್ಯಗಳೂ ನಾಶವಾಗಿ ನಿರ್ಜೀವ ಸಮಾಜ ಸೃಷ್ಟಿಯಾಗಬಹುದು. ಸಾಧ್ಯವಾದಷ್ಟು ಅರಿವುಳ್ಳ ಎಲ್ಲರೂ ಈ ರೀತಿಯ ಅಧ್ಯಯನಶೀಲದಲ್ಲಿ ಭಾಗಿಯಾಗಿ ತಮಗೆ ಉಪಕಾರ ಮಾಡಿದವರನ್ನು ಸ್ಮರಿಸುತ್ತಾ ಮುನ್ನಡೆಯಿರಿ. ವಿಶ್ವ ಬ್ರೈನ್ ದಿನದಂದು ಮತ್ತೊಮ್ಮೆ ಲೂಯಿಸ್ ಬ್ರೈಲ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,ಮನಸ್ಸು ಅಣಿಯಾಗಲಿ.

ಲೇಖನ : ಅಂಬಿಕಾ ಸಂತೋಷ್ ಶಿಕ್ಷಕಿ ಮತ್ತು ಸಾಹಿತಿ, ಹೊಸನಗರ

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>