ಹೊಸನಗರ ; ತಾಲೂಕಿನ ಕಸಬಾ ಹೋಬಳಿ ಮಸಗಲ್ಲಿ ಗ್ರಾಮದ ಸರ್ವೆ ನಂಬರ್ 16 ರಲ್ಲಿ ಇರುವ ತೋಟದ ಜಾಗದಲ್ಲಿ ಅಳವಡಿಸಿದ ಸುಮಾರು 30 ಸಾವಿರ ರೂ. ಮೌಲ್ಯದ ಎರಡು ಹೆಚ್.ಪಿ ವಿದ್ಯುತ್ ಪಂಪ್ಸೆಟ್ ಹಾಗೂ ಪಕ್ಕದ ಕೆರೆಗೆ ಅಳವಡಿಸಿದ 3 ಹೆಚ್.ಪಿ ಬೋರ್ ಸಬ್ಮರ್ಸಿಬಲ್ ಪಂಪ್ ಕಳುವಾದ ಬಗ್ಗೆ ಜಾಗದ ವಾರಸುದಾರರ ಪುತ್ರ ವೆಂಕಟರಮಣ ಎಂಬುವರು ಪೊಲೀಸ್ ಠಾಣೆಗೆ ಏ. 26ರಂದು ದೂರು ನೀಡಿ ಕಳುವಾದ ಪಂಪ್ಸೆಟ್ಗಳನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದರು.
ಅವರು ದೂರಿನಲ್ಲಿ, ತಾವು ಮಾಸ್ತಿಕಟ್ಟೆಯಲ್ಲಿ ವಾಸವಾಗಿರುವದರಿಂದ ವಾರಕ್ಕೆರಡು ಮೂರು ಬಾರಿ ಬಂದು ತೋಟಕ್ಕೆ ನೀರು ಹಾಯಿಸಿ ಹೋಗುತ್ತಿರುವುದಾಗಿ ತಿಳಿಸಿದ್ದು ಏಪ್ರಿಲ್ 18ರಿಂದ ಬಂದಾಗ ತೋಟಕ್ಕೆ ನೀರು ಹಾಯಿಸಲು ಬಳಸುತ್ತಿದ್ದ ಎರಡು ಪಂಪ್ಸೆಟ್ಗಳು ಕಳುವಾಗಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಅಕ್ಕ-ಪಕ್ಕದವರನ್ನು ಹಾಗೂ ಗ್ರಾಮಸ್ಥರನ್ನು ವಿಚಾರ ಮಾಡಿದಾಗ ಯಾವುದೇ ಸುಳಿವು ಕಂಡುಬಾರದ ಕಾರಣ ದೂರು ನೀಡುತ್ತಿರುವುದಾಗಿ ಅವರು ತಿಳಿದಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅರಳಿಕೊಪ್ಪದ ಅಂಬೇಡ್ಕರ್ ಕಾಲೋನಿ ನಿವಾಸಿ ಸುಮನ್, ಭೋವಿ ಕಾಲೋನಿ ನಿವಾಸಿ ಸಂತೋಷ್, ಅಂಬೇಡ್ಕರ್ ಕಾಲೋನಿ ನಿವಾಸಿ ನಾರಾಯಣ ಎಂಬ ಮೂವರು ಪಂಪ್ಸೆಟ್ ಕಳ್ಳರನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪಗೌಡ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್, ಕ್ರೈಂ ಪೊಲೀಸರಾದ ಮಾಯಪ್ಪ ಗೋಕಾವಿ, ಸಂದೀಪ್ ನಾಯ್ಕ ನೇತೃತ್ವದ ತಂಡ ಭಾಗವಹಿಸಿತ್ತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





