ರಿಪ್ಪನ್ಪೇಟೆ : ಆಗಸ್ಟ್ 15 ರಂದು ಎಲ್ಲರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಏಕತೆಗೆ ಕೈಜೋಡಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಮತ್ತು ದೇಶಭಕ್ತಿಯನ್ನು ಸ್ಮರಿಸಬೇಕೆಂದು ಬಿಜೆಪಿ ಜಿಲ್ಲಾ ಮುಖಂಡ ಹರಿಕೃಷ್ಣ ಹೇಳಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಜೆಪಿ ಆಯೋಜಿಸಲಾದ ಹರ್ ಘರ್ ತಿರಂಗ್ ಯಾತ್ರೆಯ ಅಭಿಯಾನದ ಅಂಗವಾಗಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಮೌನ ಮೆರವಣಿಗೆ ನಡೆಸಿ ಬಳಿಕ ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಹರಿಕೃಷ್ಣ ಮಾತನಾಡಿ, ಅಖಂಡ ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆದ ದುರಂತ ಹಾಗೂ ಅನ್ಯಾಯಗಳನ್ನು ಸ್ಮರಿಸುವ ಹಿಂದುಗಳ ಮೇಲೆ ನಡೆದ ಮಾರಣಹೋಮ, ಹಿಂಸಾಚಾರ ಹಾಗೂ ಅನ್ಯಾಯದ ಘಟನೆಗಳನ್ನು ಮೆಲುಕು ಹಾಕಿದರು.

ವಿಭಜನೆಯ ಕರಾಳ ಇತಿಹಾಸವನ್ನು ಮುಂದಿನ ಯುವಪೀಳಿಗೆ ಮರೆಯಬಾರದು. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಪ್ರತಿಯೊಬ್ಬರೂ ದೇಶಾಭಿಮಾನ ಮೂಡಿಸುವ ಉದ್ದೇಶ ಇದರಲ್ಲಿ ಇದೆ. ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶಭಕ್ತರ ಯೋಧರ ತ್ಯಾಗ ಬಲಿದಾನವಿದೆ. ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಇತಿಹಾಸವನ್ನು ಸ್ಮರಿಸಬೇಕಾಗಿದೆ. ಇಂತಹ ತಿರಂಗಾ ಯಾತ್ರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಏಕತೆಯನ್ನು ಮೂಡಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

