ಶಿವಮೊಗ್ಗ ; 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿ ಭೀಕರ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಮಲವಗೊಪ್ಪದ ಬಳಿ ಇಂದು ಬೆಳಗ್ಗೆ ನಡೆದಿದೆ.

ದುಮ್ಮಳ್ಳಿ ತಾಂಡಾದ ಕವಿತಾ (26) ಮೃತ ಯುವತಿ. ಆಕೆ ತನ್ನ ಸಹೋದರರ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಲಗೇಜ್ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇವರ ಬೈಕಿಗೆ ತಾಗಿಸಿದ್ದಾನೆ. ನಿಯಂತ್ರಣ ತಪ್ಪಿದ ಆಕೆಯ ಸಹೋದರ ಫುಟ್ ಬಾತ್ ಮೇಲೆ ಬಿದ್ದರೆ, ಆಕೆ ರಸ್ತೆಗೆ ಬಿದ್ದಿದ್ದಾಳೆ. ಪರಿಣಾಮ ವೇಗವಾಗಿ ಬರುತ್ತಿದ್ದ ಸಿಟಿ ಬಸ್ ಆಕೆಯ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಕವಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದು, ಮದುವೆಯ ಸಂಭ್ರಮದಲ್ಲಿದ್ದ ಕವಿತಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಪೂರ್ವ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

