ಸೇವಾ ನಿವೃತ್ತಿ ಹೊಂದಿ ಊರಿಗೆ ಮರಳಿದ ಸೈನಿಕನಿಗೆ ಅದ್ಧೂರಿ ಸ್ವಾಗತ
ಹೊಸನಗರ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಮರಳಿದ ತಾಲೂಕಿನ ಕಾರಣಗಿರಿಯ ಸೈನಿಕನೋರ್ವನಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಇಲ್ಲಿನ ಚರಣ್ ಕೆರೆಹೊಂಡ ಎಂಬುವವರು ಭಾರತೀಯ ಸೇನೆಯಲ್ಲಿ 16 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ತಮ್ಮ ಹುಟ್ಟೂರು ಕಾರಣಗಿರಿಗೆ ಗುರುವಾರ ಮರಳಿದರು. ಇವರ ಆಗಮನದ ನಿರೀಕ್ಷೆಯಲ್ಲಿದ್ದ ಸ್ಥಳೀಯ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ವೀರ ಯೋಧನಿಗೆ ಅದ್ದೂರಿ ಸ್ವಾಗತ ಸಮಾರಂಭ ಏರ್ಪಡಿಸಿದ್ದರು. ಮೆರವಣಿಗೆ ಮಾಡಿ ಶುಭ ಕೋರಿದರು. ಕೊಡಚಾದ್ರಿ ಜೆಸಿಐ ಸಂಸ್ಥೆ, ವರ್ತಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಪ್ರಮುಖರಾದ ಪ್ರದೀಪ್, ಪೂರ್ಣೇಶ್ ಮಲೆಬೈಲು, ಬಿ.ಎಸ್.ಸುರೇಶ್, ಕಪಿಲ ಫೈನಾನ್ಸ್ ಸುಬ್ರಮಣ್ಯ ಕಣಿವೆ ಬಾಗಿಲು, ಮೋಹನ ಶೆಟ್ಟಿ, ಕೇಶವ್, ರಾಧಾಕೃಷ್ಣ ಪೂಜಾರಿ, ರಾಧಿಕಾ, ರವಿಕುಮಾರ್, ಮಾಜಿ ಸೈನಿಕರಾದ ಕೃಷ್ಣಮೂರ್ತಿ, ರಾಮಣ್ಣ ಮತ್ತಿತರರು ಇದ್ದರು.
ಗ್ರಾಮ ನಿವಾಸಿಗಳಾದ ಶಾರದ ಹಾಗೂ ಗಣಪತಿ ಅವರ ಪುತ್ರರಾಗಿರುವ ಚರಣ್ ಭಾರತೀಯ ಸೇನೆಯ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದರು. ಹಿಮಾಚಲ ಪ್ರದೇಶ, ಸಿಕ್ಕಿಂ, ಜಮ್ಮು-ಕಾಶ್ಮೀರ, ತ್ರಿಪುರ, ಪಂಜಾಬ್, ಅರುಣಾಚಲ ಪ್ರದೇಶ, ಲಡಾಕ್ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು.