ಹೊಸನಗರ : ಸಂಸ್ಕೃತಿ ಸಂಸ್ಕಾರ ಕಲಿಸಿದರೆ, ಸಂಸ್ಕಾರ ಮನುಷ್ಯನ ಸಾಮಾಜಿಕ ಸ್ಥಿತಿಯನ್ನೇ ಬದಲಿಸುತ್ತದೆ. ಭಾರತ ಒಂದು ಸಾಂಸ್ಕೃತಿಕ ದೇಶ. ಆ ಕಾರಣಕ್ಕೆ ಎಂಥಾ ಪರಿಸ್ಥಿತಿಯಲ್ಲೂ ತನ್ನ ತನವನ್ನು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದಿದೆ ಎಂದು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ನಾರಾಯಣಮೂರ್ತಿ ಸುತ್ತಿನಬೀಸು ತಿಳಿಸಿದರು.
ಯುಗಾದಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ತ್ರಿಣಿವೆ ಗ್ರಾಮದ ಕಲಾನಾಥೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ – ಸಾಂಸ್ಕೃತಿಕ ವೇದಿಕೆ (ರಿ) ಆಯೋಜಿಸಿದ್ದ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಪ್ರತಿಯೊಬ್ಬರಲ್ಲೂ ಕಳಕಳಿಯ ಅವಶ್ಯಕತೆ ಇದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶಮೂರ್ತಿ ನಾಗರಕೊಡಿಗೆ ಮಾತನಾಡಿ,
ಪ್ರತಿ ಸಾಂಸ್ಕೃತಿಕ ಕಾರ್ಯಕ್ರಮವು ಒಂದು ಹೊಸ ಪ್ರತಿಭೆಯನ್ನು ಗುರುತಿಸುವಲ್ಲಿ ಫಲಕಾರಿಯಾಗಿದೆ. ಮನುಷ್ಯನ ಖಿನ್ನತೆಯನ್ನು ದೂರ ಮಾಡಲು ಸಾಹಿತ್ಯ ಅತ್ಯವಶ್ಯ ಸಿದ್ದೌಷಧವಾಗಿದ್ದು, ಒತ್ತಡದ ಬದುಕನ್ನು ನಿರ್ವಹಿಸುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ನಡುವೆ ಒಂದಷ್ಟು ಸಾಹಿತ್ಯ, ಸಂಗೀತ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಹದಗೊಳಿಸಿಕೊಳ್ಳಬೇಕು. ತಪ್ಪಿದಲ್ಲಿ, ಮಾನವ ಹಲವು ಖಾಯಿಲೆಗಳಿಗೆ ತುತ್ತಾಗಿ ಆತನ ಬದುಕು ನರಕ ಸದೃಶ ಆಗುವಲ್ಲಿ ಸಂದೇಹವಿಲ್ಲ. ಅಲ್ಲದೆ, ಒಳ್ಳೆಯ ಪುಸ್ತಕಗಳ ಓದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಇವೆಲ್ಲವು ಮನುಷ್ಯನನ್ನು ಪ್ರಬುದ್ಧಗೊಳಿಸುತ್ತವೆ. ಬದುಕನ್ನು ಎದುರಿಸಲು ಮತ್ತು ಉತ್ತಮ ಸಾಧನೆ ಸಾಧಿಸಲು, ಎಂತಹ ಗಂಭೀರ ಸಂದರ್ಭವನ್ನು ನಿಭಾಯಿಸುವ ಶಕ್ತಿ ತುಂಬುತ್ತದೆ ಎಂದರು.
ಮಂಜುನಾಥ ಸುತ್ತಿನಬೀಸು ತಂಡದ ಕಿರಿಯರಿಂದ ತಾಳಮದ್ದಲೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಶ್ರೀ ಕಲಾನಾಥೇಶ್ವರ ದೇವಸ್ಥಾನದ ಸಂಸ್ಥಾಪಕ ಸುಬ್ಬಭಟ್ಟ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹರೀಶ್ ಸಾಮಗ ಪಂಚಾಂಗ ಶ್ರವಣ ನೆರವೇರಿಸಿದರು.
ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ರಮಾಕಾಂತಿ, ಗಾಯತ್ರಿ, ಶೋಭಾ, ಲಲಿತ, ಸತ್ಯನಾರಾಯಣ ಆಚಾರ್, ಗೀತಾ, ಗಿರೀಶ್, ಚಂದ್ರಶೇಖರ್, ಗುಂಡಣ್ಣ, ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಾನಂದಪ್ಪ ನಿರೂಪಿಸಿ, ವೀಣಾ ಮೂರ್ತಿ ಪ್ರಾರ್ಥಿಸಿ,
ರಾಘವೇಂದ್ರ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





