ಹೊಸನಗರ

ಹೊಸನಗರ ; ನೆಹರೂ ಮೈದಾನದ ಬೇಲಿ ಕಿತ್ತು ಫುಡ್‌ಕೋರ್ಟ್ ನಿರ್ಮಾಣ ಕಾಮಗಾರಿ ಆರಂಭಕ್ಕೆ ನಾಗರಿಕರ ವಿರೋಧ

ಹೊಸನಗರ ; ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ನೆಹರೂ ಮೈದಾನದ ಸುತ್ತಲೂ ನಿರ್ಮಿಸಿದ್ದ ಮೆಶ್‌ಬೇಲಿಯನ್ನು ಕಿತ್ತು ಹಾಕಿ, ಅಲ್ಲಿ ಹೊಸದಾಗಿ ಫುಡ್‌ಕೋರ್ಟ್ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಿರುವ ಕ್ರಮಕ್ಕೆ ಪಟ್ಟಣದ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ಮೌಖಿಕವಾಗಿ ದೂರು ನೀಡಿದ್ದು, ಈ ಹಿಂದೆ ಇದ್ದು ಹೆದ್ದಾರಿ ನಿಯಮಾನಸುರ ಸ್ಥಳಾಂತರಗೊಂಡಿದ್ದ ಬೀದಿ ಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿಗಳಿಗೆ ಮತ್ತೆ ಅದೇ ಜಾಗದಲ್ಲಿ ಅಂಗಡಿ ತೆರೆಯಲು ಪಟ್ಟಣ ಪಂಚಾಯತಿ ಫುಡ್‌ಕೋರ್ಟ್ ಹೆಸರಿನಲ್ಲಿ ಅವಕಾಶ ನೀಡಲು ಮುಂದಾಗಿದೆ. ಇದರು ಸಂಪೂರ್ಣ ಅವೈಜ್ಞಾಣಿಕ.

ಫುಟ್‌ಪಾತ್ ಸಹಾ ಸಮೀಪದಲ್ಲಿಯೇ ಇದ್ದು, ಫುಡ್ ಕೋರ್ಟ್‌ಗೆ ಆಗಮಿಸುವ ಗಿರಾಕಿಗಳು ಮುಂದೆ ಫುಟ್‌ಪಾತ್ ಮೇಲೆಯೇ ವಾಹನ ನಿಲುಗಡೆ ಮಾಡುವ ಸಂಭವವಿದೆ. ಇದರಿಂದ ಅಪಘಾತಗಳಿಗೆ ಆಸ್ಪದ ನೀಡಿದಂತಾಗುತ್ತದೆ. ಫುಟ್‌ಪಾತ್ ಮೇಲೆ ಯಾವುದೇ ಅಂಗಡಿ ಮುಂಗಟ್ಟು ಇರಬಾರದು, ಪಾದಚಾರಿಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿರಬೇಕೆಂಬ ಸುಪ್ರೀಂಕೋರ್ಟ ಆದೇಶವೇ ಇದೆ. ಇದಲ್ಲೆದರ ನಡುವೆ ತರಾತುರಿಯಲ್ಲಿ ಫುಡ್‌ಕೋರ್ಟ್ ನಿರ್ಮಾಣ ಮಾಡಲು ನಿಯಮ ಉಲ್ಲಂಘಿಸುತ್ತಿರುವುದು ಯಾಕೆ? ಎಂಬ ಪ್ರಶ್ನೆ ಎದುರಾಗಿದೆ.

30 ಲಕ್ಷ ರೂ. ಅನುದಾನದಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಕೈಗೊಂಡಿರುವ ನೂತನ ಫುಡ್‌ಕೋರ್ಟ್ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನಡೆಯಲಿದೆ ಎನ್ನಲಾಗಿದ್ದು, ಈಗಾಗಲೇ ಮೆಷ್ ಬೇಲಿಯನ್ನು ಕೀಳಲಾಗಿದೆ. ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಗಮನಕ್ಕೂ ಬಾರದೇ ಕೆಲಸ ಆರಂಭಿಸಲಾಗಿದೆ. ಅನುದಾನವನ್ನು ಬಳಕೆ ಮಾಡಬೇಕು ಎಂಬ ತರಾತುರಿ ಹೊರತುಪಡಿಸಿ ಬೀದಿಬದಿ ವ್ಯಾಪಾರಿಗಳ ಹಿತದೃಷ್ಠಿ ಇಲ್ಲದೇ ಹಾಗೂ ನಾಗರಿಕರ ಮನವಿಗೆ ಬೆಲೆ ಇಲ್ಲದಂತೆ ಪಟ್ಟಣ ಪಂಚಾಯಿತಿ ಆಡಳಿತ ವರ್ತಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಮ್ಮ ಅಧಿಕಾರವಧಿಯಲ್ಲಿ ಫುಡ್ ಕೋರ್ಟ್‌ಗೆ ಬೇರೆಯದೇ ಜಾಗ ಅಂತಿಮಗೊಳಿಸಲಾಗಿತ್ತು. ಈಗ ಏಕಾಏಕಿ ಹೆದ್ದಾರಿ ಪಕ್ಕ ನಿರ್ಮಿಸಲು ಮುಂದಾಗಿರುವುದು ಅವೈಜ್ಞಾನಿಕ. ಈಗಾಗಲೇ ಒಮ್ಮೆ ಎತ್ತಂಗಡಿ ಆಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಖಾಯಂ ಜಾಗ ತೋರಿಸಬೇಕೇ ಹೊರತು ಮತ್ತೊಮ್ಮೆ ಸಮಸ್ಯೆ ಆಗುವಂತ ಪರಿಸ್ಥಿತಿ ಬರಬಾರದು. ಪಟ್ಟಣ ಪಂಚಾಯತಿ ಆಡಳಿತ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕಿದೆ. ಅನುದಾನ ಬಳಕೆ ಆಗಬೇಕೆಂದು ಎಲ್ಲೆಂದರಲ್ಲಿ ಕಾಮಗಾರಿ ಮಾಡುವುದು ಸರಿಯಲ್ಲ.
– ಹಾಲಗದ್ದೆ ಉಮೇಶ್, ಮಾಜಿ ಅಧ್ಯಕ್ಷರು, ಪ‌.ಪಂ. ಹೊಸನಗರ

inshot_20260410_0841121048127490135883957941.jpg

Leave a Comment