ಪೌರ ಪ್ರಜ್ಞೆಯ ಮೇಲೆ ದೇಶದ ಗೌರವ ನಿಂತಿದೆ : ಶಾಸಕ ಆರಗ ಜ್ಞಾನೇಂದ್ರ

Written by Mahesha Hindlemane

Published on:

ರಿಪ್ಪನ್‌ಪೇಟೆ : ಶಿಕ್ಷಣವು ಅಕ್ಷರಭ್ಯಾಸವಲ್ಲ ನಾವು ಪಡೆಯುವ ಶಿಕ್ಷಣ ನಮ್ಮ ಸಂಸ್ಕೃತಿಯ ಬೇರುಗಳನ್ನು ತಳಮೂಲದಿಂದ ಅರಿಯುವ ಪ್ರೇರಕ ಶಕ್ತಿಯಾಗಬೇಕು ಆ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ, ನಾವು ನಮ್ಮ ವೈಯಕ್ತಿಕ ಬದುಕನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಸಮ ಸಮಾಜವನ್ನು ಪ್ರೀತಿಸುವ ಗೌರವಿಸುವ ವ್ಯಕ್ತಿಯನ್ನಾಗಿ ರೂಪಿಸಬೇಕು. ಆಗ ಮಾತ್ರ ನಾವು ಪಡೆದ ಶಿಕ್ಷಣಕ್ಕೆ ಒಂದು ಅರ್ಥ ಬರುತ್ತದೆ.

ಇಂದು ದೇಶದಲ್ಲಿ ನಡೆಯುತ್ತಿರುವ ದೂರಾಚಾರ ಅನಾಚಾರಗಳಲ್ಲಿ ವಿದ್ಯಾವಂತರೆ ಭಾಗಿಯಾಗಿರುವುದು ದುರಾದೃಷ್ಟಕರ. ಯಾವುದೇ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಲಂಚಗುಳಿತನಕ್ಕೆ ಕಾರಣ ಕರ್ತರಾಗಿರುವವರು ಉನ್ನತ ಹುದ್ದೆ ಹಾಗೂ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರೇ ಆಗಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ಜಗತ್ತಿನ ಹಲವಾರು ಮುಂದುವರಿದ ರಾಷ್ಟ್ರಗಳು ವ್ಯಾಪ್ತಿಯಲ್ಲಿ ಚಿಕ್ಕದಾಗಿದ್ದರು ತಮ್ಮ ಬದ್ಧತೆ ಹಾಗೂ ಪ್ರಾಮಾಣಿಕ ಕರ್ತವ್ಯ ನಿಷ್ಠೆಯಿಂದ ದುಡಿಯುತ್ತಿರುವುದರಿಂದ ಶ್ರೇಷ್ಠ ಸಾಲಿನಲ್ಲಿ ನಿಂತಿವೆ. ಭಾರತ ಇಂದು ಕಸದ ರಾಶಿಯಾಗುತ್ತಿದೆ ಅದರ ಕರ್ತೃ ವಿದ್ಯಾವಂತ ನಾಗರಿಕ ಎನಿಸಿಕೊಂಡವರೇ ನಮ್ಮಲ್ಲಿ ಮೊದಲು ಪೌರ ಪ್ರಜ್ಞೆ ಮೂಡಬೇಕು ಎಂದರು.

ಇಂದು ಹಲವು ಸವಾಲುಗಳ ನಡುವೆಯೂ ಕೂಡ ಒಂದು ಗ್ರಾಮೀಣ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶ ನೀಡುವುದರೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಇಂದು ಖಾಸಗಿ ಕಾಲೇಜುಗಳನ್ನು ಮೀರಿಸುರ ಮೀರಿಸುವಷ್ಟರ ಮಟ್ಟಿಗೆ ದಾಖಲಾತಿ ಪಡೆಯುತ್ತಿರುವುದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಈ ಕಾಲೇಜು ಆಯ್ಕೆ ಮಾಡಿಕೊಳ್ಳುತ್ತಿರುವುದು ಈ ಕಾಲೇಜಿನ ಗುಣಾತ್ಮಕ ಬೋಧನೆಯನ್ನು ಸಾಕ್ಷಿಕರಿಸುತ್ತದೆ. ಇಂತಹ ಕಾಲೇಜುಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ 2026 ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 60 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಪ್ರೊ. ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಠಾನ ಕೊಡ ಮಾಡುವ ಪ್ರತಿಭಾ ಪುರಸ್ಕಾರ ಡಾ. ಜಿ.ಡಿ ನಾರಾಯಣಪ್ಪನವರ ದತ್ತಿ ನಿಧಿ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹಾಗೂ ವೈದ್ಯರತ್ನ ಡಾ. ಜಿ.ಡಿ ನಾರಾಯಣಪ್ಪ, ವಿಶ್ರಾಂತ ಪ್ರಾಂಶುಪಾಲ ಮಹಮದ್ ನಜಹತ್, ಅನಂತಮೂರ್ತಿ ಅವುಕ, ಸಿಡಿಸಿ ಕಾರ್ಯಾಧ್ಯಕ್ಷ ಟಿ ಡಿ ಸೋಮಶೇಖರ್ ಉಪಸ್ಥಿತರಿದ್ದರು.

ಕಾಲೇಜು ಪ್ರಭಾರ ಪ್ರಾಚಾರ್ಯ ಹಾಲಪ್ಪ ಸಂಕೂರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಹಿರಿಯ ಉಪನ್ಯಾಸಕ ಶಂಕರಪ್ಪ ಕಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಸೋಮಯಾಜಿ ಸ್ವಾಗತಿಸಿದರು. ಫ್ರಾನ್ಸಿಸ್ ಬೆಂಜಮಿನ್ ಕಾರ್ಯಕ್ರಮವನ್ನು ನಿರೂಪಿಸಿದರು‌.

Leave a Comment