ಹೊಸನಗರ : ಮಲೆನಾಡು ಅಡಿಕೆ ಮಾರಾಟ ಸಂಘವು ಮಾಮ್ಕೋಸ್ ಎಂದೆ ಪ್ರಸಿದ್ಧ ಪಡೆದಿದ್ದು ಅಡಿಕೆ ಬೆಳೆಗಾರರ ಹಿತವನ್ನು ಕಾಯುವ ಉದ್ದೇಶದಿಂದ ಈ ಸಂಘ ಪ್ರಾರಂಭಿಸಿ 2025-26ನೇ ಸಾಲಿನಲ್ಲಿ ಸುಮಾರು ₹ 9.52 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಲು ಹರ್ಷವಾಗುತ್ತಿದೆ ಎಂದು ಜಿಲ್ಲಾ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಹೇಳಿದರು.
ಇಲ್ಲಿನ ಚೌಡಮ್ಮ ರಸ್ತೆಯಲ್ಲಿರುವ ಮಲೆನಾಡು ಅಡಿಕೆ ಮಾರಾಟದ ಸಹಕಾರಿ ಸಂಘದ ಸ್ವಂತ ಕಟ್ಟಡದಲ್ಲಿ ಷೇರುದಾರರ ಸಭೆ ಬುಧವಾರ ನಡೆಸಲಾಗಿದ್ದು ಈ ಸಭೆಯಲ್ಲಿ ಅವರು ಮಾತನಾಡಿ, 1939ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಅಂದು ಕೇವಲ 629 ಜನ ಸದಸ್ಯರಿದ್ದು 5121 ಮೂಟೆ ಮಾತ್ರ ಅಡಿಕೆ ಅವಕವಾಗಿತ್ತು. 16,031 ರೂ. ಷೇರು ಬಂಡವಾಳದೊಂದಿಗೆ ಆರಂಭವಾದ ಸಂಘವು ಸ್ಥಾಪನೆಯ ವರ್ಷವೇ 3.867 ನಿವ್ವಳ ಲಾಭ ಗಳಿಸಿ ಶೇ.6.25ರಷ್ಟು ಡಿವಿಡೆಂಡ್ ನೀಡುವಲ್ಲಿ ಸಫಲವಾಯಿತು. ನಂತರ ಮಾಮ್ಕೋಸ್ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದು ಪ್ರಸ್ತುತ 31850 ಸದಸ್ಯರೊಂದಿಗೆ ಸದೃಢ ಆರ್ಥಿಕ ತಳಹದಿಯನ್ನು ಹೊಂದಿರುತ್ತದೆ. ಪ್ರಾರಂಭದಿಂದ ಇಲ್ಲಿಯವರೆಗೆ ಲಾಭದಲ್ಲೇ ಕಾರ್ಯ ನಿರ್ವಹಿಸುತ್ತಾ ಪ್ರತಿ ವರ್ಷ ಡಿವಿಡೆಂಡ್ನ್ನು ನೀಡುತ್ತಿರುವುದು ಹೆಗ್ಗಳಿಕೆಯನ್ನು ಸಂಸ್ಥೆಯು ಹೊಂದಿದೆ ಎಂದರು.
ಆಡಳಿತ ವ್ಯಾಪ್ತಿ ;
ಸಂಘವು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳು ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳನ್ನು ಸೇರಿ ಒಟ್ಟು 17 ತಾಲ್ಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದರು.
ಹೆಚ್ಚಿಗೆ ಲಾಭ :
2025-26ನೇ ಸಾಲಿನಲ್ಲಿ ಸಂಸ್ಥೆಯು ಅಂದಾಜು ₹ 9.52 ಲಕ್ಷ ನಿವ್ವಳ ಲಾಭ ಗಳಿಸಿದ್ದು ಕಳೆದ ಸಾಲಿಗಿಂತ ಹೆಚ್ಚು ಲಾಭ ಗಳಿಸಿರುತ್ತದೆ. ಈ ಸಾಲಿನಲ್ಲಿ ಸಂಸ್ಥೆ ಒಟ್ಟು ವ್ಯವಹಾರವು ಅಂದಾಜು ₹ 1636 ಕೋಟಿಗಳಾಗಿದ್ದು ಕಳೆದ ಸಾಲಿಗಿಂತ ₹ 338.62 ಕೋಟಿ ಹೆಚ್ಚಿಗೆ ವ್ಯವಹಾರವಾದಂತಾಗುತ್ತದೆ ಎಂದರು.
ರೈತರಿಗೆ ವಿವಿಧ ರೂಪದಲ್ಲಿ ಸಾಲ :
ಅಡಿಕೆ ಆಧಾರ : ಸಾಲ ರೈತರ ಮೇಲೆ ಶೇ.60ರಷ್ಟು ಮುಂಗಡ ಪಾವತಿ ಬಡ್ಡಿ ದರ ಶೇ.11.50
ಕಟಾವು ಸಾಲ : ಪ್ರತಿ ಗುಂಟೆಗೆ ₹ 2,000 ರಂತೆ ಅಡಿಕೆ ವಹಿವಾಟು ಆಧರಿಸಿ ಗರಿಷ್ಟ ₹ 2 ಲಕ್ಷ ನೀಡಲಾಗುವುದು. ಕ್ರೆಡಿಟ್ ಕಾರ್ಡ್ ಮೂಲಕ ಪಡೆಯಬಹುದಾಗಿದೆ. ಅದರ ಬಡ್ಡಿ ಶೆೇ.11.50 ಆಗಿರುತ್ತದೆ ಎಂದರು.

ಕೊಳೆ ಔಷಧಿ ಸಾಲವನ್ನು ನಮ್ಮ ಸಂಸ್ಥೆ ನೀಡಲಾಗುತ್ತಿದ್ದು ಪ್ರತಿ ಗುಂಟೆಗೆ 300 ರಂತೆ ಅಡಿಕೆ ವಹಿವಾಟು ಆಧರಿಸಿ ಗರಿಷ್ಟ 50 ಸಾವಿರ ಸಾಲವನ್ನು ಕೊಳೆ ಔಷಧಿ ಸಾಲವನ್ನು ಮಾತ್ರ ಪಡೆಯಲು ಇಚ್ಛಿಸಿದಲ್ಲಿ ಅಂತಹವರಿಗೆ ಪ್ರತಿ ಗುಂಟೆಗೆ ₹ 500 ರಂತೆ ₹ 80 ಸಾವಿರದಷ್ಟು ಸಾಲ ವಿತರಿಸಲಾಗುತ್ತದೆಂದರು.
ಗುಂಪು ವಿಮಾ ಯೋಜನೆ :
ಮಾಮ್ಕೋಸ್ ಸಂಸ್ಥೆಯು ತನ್ನ ಸದಸ್ಯರಿಗಾಗಿ ಗುಂಪು ವಿಮಾ ಅಭಿರಕ್ಷೆ ಯೋಜನೆಯನ್ನು ಜಾರಿಗೆ ತಂದಿದ್ದು ಇದರಲ್ಲಿ ಸದಸ್ಯರು ಸಂಘದ ಶಾಖೆಗಳ ಮೂಲಕ ವಂತಿಕೆ ಮೊಬಲಗನ್ನು ಪಾವತಿಸಿದರೆ ಆ ಸದಸ್ಯರಿಗೆ ಮತ್ತು ಅವರ ಹೆಸರಿಸಿದ ಕೂಲಿ ಕಾರ್ಮಿಕರುಗಳಿಗೆ ಹಾಗೂ ಕುಟುಂಬದ ಸದಸ್ಯರಿಗೆ ವಿಮೆ ಮಾಡಲಾಗುವುದು. ಸದಸ್ಯರ ಹಿತದೃಷ್ಟಿಯಿಂದ ಗುಂಪು ವಿಮಾ ಅಭಿರಕ್ಷೆ ಯೋಜನೆ ಅಡಿಯಲ್ಲಿ 70 ವರ್ಷದೊಳಗಿನ ಸದಸ್ಯರು ಅಥವಾ ಅವಲಂಬಿತ ಕೂಲಿ ಕಾರ್ಮಿಕರಿಗೆ ಮೃತರ ಪ್ರಕರಣದಲ್ಲಿ ಕ್ಲೈಮ್ ಮೊಬಲಗನ್ನು ₹ 6 ಲಕ್ಷದಿಂದ ₹ 7 ಲಕ್ಷಕ್ಕೆ ಮತ್ತು ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ₹ 1.50 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2025-26ನೇ ಸಾಲಿನಲ್ಲಿ ಈ ಯೋಜನೆ ಅಡಿಯಲ್ಲಿ 76 ಪ್ರಕರಣಗಳಲ್ಲಿ ₹ 77,78,224 ಪರಿಹಾರ ನೀಡಲಾಗಿದೆ ಎಂದು ಸಭೆಗೆ ತಿಳಿಸಿದ್ದು, ಒಟ್ಟಾರೆ ನಮ್ಮ ಸಂಸ್ಥೆ ಎಲ್ಲ ಷೇರುದಾರರ ಸಹಕಾರದಿಂದ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ, ನಿರ್ದೇಶಕರಾದ ಕೆ.ವಿ ಕೃಷ್ಣಮೂರ್ತಿ, ಧರ್ಮೇಂದ್ರ ಹೆಚ್, ನಂದನ್ ಹೆಚ್.ಸಿ, ಕುಬೇಂದ್ರಪ್ಪ ಎಂ, ರತ್ನಾಕರ್ ಕೆ, ಸತೀಶ್ ಎನ್, ರಮೇಶ್ ಟಿ ಎಲ್, ವೀರೇಶ್ ಯು.ವಿ, ಸುಬ್ರಹ್ಮಣ್ಯ, ವೈ ಎಸ್, ಬಮ್ಮಪ್ಪ, ಶಾಖಾ ವ್ಯವಸ್ಥಾಪಕರಾದ ಗಣಪತಿ ಎಸ್.ಕೆ, ಮಧುಸೂದನ್, ಮೇಘರಾಜ್, ಲೀಲಾವತಿ, ವಿದ್ಯಾ, ದಯಾನಂದ್, ದೇವೇಂದ್ರ, ಷೇರುದಾರರಾದ ಹರತಾಳು ನಾಗರಾಜ್, ಜರೇಂದ್ರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





