ಹೊಸನಗರ: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ 2025-26ನೇ ಆರ್ಥಿಕ ವರ್ಷದಲ್ಲಿ ಒಟ್ಟು ₹6,23,044 ಲಾಭ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಎಂ.ವಿ. ಜಯರಾಮ್ ತಿಳಿಸಿದ್ದಾರೆ.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬ್ಯಾಂಕ್ನ 81ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ಥಿಕ ಪ್ರಗತಿ ಮತ್ತು ಸವಾಲುಗಳು:
ಸಾಲ ಮತ್ತು ಬಡ್ಡಿ ಮರುಪಾವತಿ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದರೂ ಬ್ಯಾಂಕ್ ಲಾಭದ ಹಾದಿಯಲ್ಲಿದೆ. 7ನೇ ವೇತನ ಆಯೋಗದ ಜಾರಿಯಿಂದಾಗಿ ಸಿಬ್ಬಂದಿಗಳ ವೇತನ ಪಾವತಿಗೆ ಅಂದಾಜು ₹15 ಲಕ್ಷ ಹಾಗೂ ಸರ್ಕಾರದ ವಿವಿಧ ಸಾಲಗಳಿಗೆ ₹7 ಲಕ್ಷ ಹೆಚ್ಚುವರಿ ಹಣವನ್ನು ಬ್ಯಾಂಕ್ ಭರಿಸಬೇಕಾಗಿ ಬಂದಿದೆ ಎಂದು ಅವರು ವಿವರಿಸಿದರು. ಸುಸ್ತಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದು, ಬ್ಯಾಂಕ್ಗೆ ಬರಬೇಕಿರುವ ಬಡ್ಡಿ ಮೊತ್ತವೇ ₹2 ಕೋಟಿಯಷ್ಟಿದೆ. ಈ ಸಾಲಿನಲ್ಲಿ ಕೇವಲ ₹2.98 ಲಕ್ಷ ಬಡ್ಡಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ನ ಪ್ರಮುಖ ಸಾಧನೆಗಳು:
- ಕೃಷಿ ಸಾಲ ವಿತರಣೆ: ₹3 ಕೋಟಿಗೂ ಅಧಿಕ
- ಹೆಚ್ಚುವರಿ ಠೇವಣಿ ಸಂಗ್ರಹ: ₹3.50 ಕೋಟಿ
- ಸ್ವಂತ ಬಂಡವಾಳದ ವಹಿವಾಟು: ₹4 ಕೋಟಿ
- ಪ್ರಸಕ್ತ ಸಾಲಿನಲ್ಲಿ 63 ಹೊಸ ಸದಸ್ಯರಿಗೆ ಸಾಲ ಸೌಲಭ್ಯ ವಿತರಣೆ.
ತಾಲೂಕಿನಲ್ಲೇ ಅತಿ ಹೆಚ್ಚು ಸದಸ್ಯರು:
ಹೊಸನಗರ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ 9,031 ಸದಸ್ಯರನ್ನು ಹೊಂದುವ ಮೂಲಕ ನಮ್ಮ ಬ್ಯಾಂಕ್ ಮುಂಚೂಣಿಯಲ್ಲಿದೆ. ಆಡಳಿತ ಮಂಡಳಿಯ ಒಗ್ಗಟ್ಟು ಹಾಗೂ ಶ್ರಮದಿಂದ ಬ್ಯಾಂಕ್ ಉತ್ತಮ ಹೆಸರು ಗಳಿಸಿದ್ದು, ಬಡ ರೈತರಿಗೆ ಸೇವೆ ಸಲ್ಲಿಸುವ ಅವಕಾಶ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಕೃಷಿಕರಿಗೆ ಇನ್ನಷ್ಟು ಸಾಲ ಸೌಲಭ್ಯಗಳನ್ನು ತಲುಪಿಸುವ ಗುರಿ ಹೊಂದಿದ್ದು, ಇದಕ್ಕೆ ಎಲ್ಲ ಸದಸ್ಯರ ಬೆಂಬಲ ಅತ್ಯಗತ್ಯ ಎಂದು ಅವರು ಮನವಿ ಮಾಡಿದರು.
ವಸೂಲಾತಿ ಬಿಗಿಗೊಳಿಸದಿರಿ :
ಈ ಬಾರಿ ರೈತರು ಹಿಂದೆಂದೂ ಕಾಣದ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿ ಎದುರಿಸಿವಂತಾಗಿದ್ದು ಇದರ ಮಧ್ಯೆ ಮಂಗಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಪರಿಸ್ಥಿತಿ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸೂಲಾತಿಗೆ ಬಿಗಿ ಕ್ರಮ ಕೈಗೊಳ್ಳಬಾರದೆಂದು ನೆರೆದಿದ್ದ ಸದಸ್ಯರುಗಳು ಒಕ್ಕೊರಲಿನಿಂದ ಆಡಳಿತ ಮಂಡಳಿ ಗಮನಕ್ಕೆ ತಂದರು.
ಮಹಾಸಭೆಯಲ್ಲಿ ಬ್ಯಾಂಕ್ನ ಉಪಾಧ್ಯಕ್ಷರಾದ ನಾಗೇಶ್ ಕೆ.ಎಸ್., ವ್ಯವಸ್ಥಾಪಕ ಮಣಿಕಂಠ ಅಂಗಡಿ, ನಿರ್ದೇಶಕರುಗಳಾದ ಗುರುಮೂರ್ತಿ, ನಾಗೇಶ್ ಕೆ.ಟಿ., ಮಹೇಂದ್ರ ಪಿ.ಸಿ., ನಿಜಲಿಂಗಪ್ಪ, ಹೆಚ್.ಆರ್. ದೇವೇಂದ್ರಪ್ಪ, ಹೇಮಾವತಿ, ಹೂವಮ್ಮ, ನರೇಂದ್ರ, ಸತೀಶ ಎಂ.ಟಿ., ಈಶ್ವರಪ್ಪ ಬಿ., ನಾಗೇಂದ್ರ ಹಾಗೂ ಸಿಬ್ಬಂದಿಗಳಾದ ಸುಕುಮಾರ್ರಾವ್ ಹೆಚ್.ಎಸ್., ರುಕ್ಮಿಣಿ, ಶ್ರೀನಿಧಿ, ಶೋಭಾ, ಭುವನ್, ತೇಜಸ್ವಿನಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಗಲಹರಿ ಬಳಗದವರಿಂದ ಪ್ರಾರ್ಥನೆ, ನಾಡಗೀತೆ, ರೈತಗೀತೆ ನಡೆಯಿತು. ಬ್ಯಾಂಕ್ನ ನಿರ್ದೇಶಕ ಎಂ ಟಿ ಸತೀಶ್ ಸ್ವಾಗತಿಸಿದರು. ವ್ಯವಸ್ಥಾಪಕ ಮಣಿಕಂಠ ಅಂಗಡಿ ಮಹಾಸಭೆಗೆ ತಿಳುವಳಿಕೆ ಪತ್ರ ಓದಿದರು.

