ರಿಪ್ಪನ್ಪೇಟೆ : ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ನಡುಮನೆ ಎಂದೇ ಖ್ಯಾತಿ ಹೊಂದಿರುವ ಹೊಸನಗರ ತಾಲ್ಲೂಕಿನಲ್ಲಿ 2026ನೇ ಸಾಲಿನಲ್ಲಿ ತೀವ್ರ ಮಳೆಯ ಕೊರತೆಯುಂಟಾಗಿದ್ದು, ಭೀಕರ ಬರಗಾಲದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕನ್ನು ತಕ್ಷಣವೇ ‘ಬರಪೀಡಿತ ಪ್ರದೇಶ’ ಎಂದು ಘೋಷಿಸಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮ್ಯಾಮ್ಕೋಸ್ ನಿರ್ದೇಶಕ ಹಾಗೂ ಹೊಸನಗರ ಕೃಷಿಕ ಸಮಾಜದ ಉಪಾಧ್ಯಕ್ಷ ಧರ್ಮೇಂದ್ರ ಹೆಚ್. ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಣಗುತ್ತಿರುವ ಬೆಳೆಗಳು:
ಮಳೆಯಿಲ್ಲದೆ ರೈತರು ನಾಟಿ ಮಾಡಿದ್ದ ಭತ್ತದ ಪೈರುಗಳು ಒಣಗುತ್ತಿವೆ. ಬ್ಯಾಂಕ್ಗಳಲ್ಲಿ ಸಾಲ ಮಾಡಿ ಕಷ್ಟಪಟ್ಟು ಬೆಳೆಸಿದ ಅಡಿಕೆ ಮರಗಳು ಕೂಡ ತೇವಾಂಶವಿಲ್ಲದೆ ಬಾಡುತ್ತಿವೆ.
ನೀರು ಮತ್ತು ಮೇವಿನ ಅಭಾವ:
ಸೆಪ್ಟೆಂಬರ್ ತಿಂಗಳು ಬಂದರೂ ವಾಡಿಕೆಯಷ್ಟು ಮಳೆಯಾಗಿಲ್ಲ. ಇದರಿಂದಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಬರಿದಾಗಿದ್ದು, ಮುಂಬರುವ ದಿನಗಳಲ್ಲಿ ಮನುಷ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಬರಪೀಡಿತ ಪ್ರದೇಶ ಘೋಷಿಸಲು ಆಗ್ರಹ:
ಮುಂಬರುವ ಜಲಕಂಟಕವನ್ನು ತಪ್ಪಿಸಲು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡಲು, ಸರ್ಕಾರ ಕೂಡಲೇ ಹೊಸನಗರವನ್ನು ಬರಪೀಡಿತ ತಾಲ್ಲೂಕು ಎಂದು ಅಧಿಕೃತವಾಗಿ ಘೋಷಿಸಿ ಪರಿಹಾರ ವಿತರಿಸಬೇಕು.
ಗುಟ್ಕಾ ನಿಷೇಧ ಹಿಂಪಡೆಯಿರಿ:
ಮಾರುಕಟ್ಟೆಯಲ್ಲಿ ದಿನೇ ದಿನೇ ಅಡಿಕೆ ಬೆಲೆ ಕುಸಿಯುತ್ತಿರುವುದರಿಂದ ಬೆಳೆಗಾರರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಗುಟ್ಕಾ ಮೇಲಿರುವ ನಿಷೇಧವನ್ನು ಸರ್ಕಾರ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

