ಹೊಸನಗರ

ಶಿಕ್ಷಕರ ದಿನಾಚರಣೆ ದಿನಾಂಕ ಬದಲಾವಣೆಯಲ್ಲಿ ಶಾಸಕ ಬೇಳೂರು ಪಾತ್ರವಿಲ್ಲ: ಕಾಂಗ್ರೆಸ್ ಸ್ಪಷ್ಟನೆ

ಪಟ್ಟಣದಲ್ಲಿ ಸೆಪ್ಟೆಂಬರ್ 5ರ ಬದಲಾಗಿ 7ರಂದು ಶಿಕ್ಷಕರ ದಿನಾಚರಣೆ ಆಯೋಜಿಸಿರುವುದಕ್ಕೂ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಸ್ಪಷ್ಟಪಡಿಸಿದೆ.

InShot 20260908 202310054

ಹೊಸನಗರ : ಪಟ್ಟಣದಲ್ಲಿ ಸೆಪ್ಟೆಂಬರ್ 5ರ ಬದಲಾಗಿ 7ರಂದು ಶಿಕ್ಷಕರ ದಿನಾಚರಣೆ ಆಯೋಜಿಸಿರುವುದಕ್ಕೂ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಸ್ಪಷ್ಟಪಡಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ವಿರೋಧ ಪಕ್ಷದವರ ಆರೋಪಗಳನ್ನು ತಳ್ಳಿಹಾಕಿದರು. “ಒಂದೇ ದಿನ ಸಾಗರ ಮತ್ತು ಹೊಸನಗರಗಳೆರಡರಲ್ಲೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕರಿಗೆ ಸಮಯದ ಅಭಾವವಿದ್ದ ಕಾರಣ, ಸ್ವತಃ ಶಿಕ್ಷಕರ ಸಂಘವೇ ದಿನಾಂಕವನ್ನು ಬದಲಾಯಿಸಿಕೊಳ್ಳಲು ಒಪ್ಪಿಗೆ ಸೂಚಿಸಿತ್ತು. ಆದರೆ, ಬಿಜೆಪಿಯವರು ಶಾಸಕರೇ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಬದಲಾಯಿಸಿದ್ದಾರೆ ಎಂದು ವೃಥಾ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೊಸನಗರ ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಪರ್ವ ;

ಶಾಸಕರಾಗಿ ಆಯ್ಕೆಯಾದ ಬಳಿಕ ಬೇಳೂರು ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿ ಮಾಡಿರುವ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ರಸ್ತೆಗಳ ಅಭಿವೃದ್ಧಿ: ಪಿಡಬ್ಲ್ಯೂಡಿ ಸೇರಿದಂತೆ ಎರಡು ಹೋಬಳಿಗಳ ವ್ಯಾಪ್ತಿಯ ಒಟ್ಟು 50 ಕಿ.ಮೀಗೂ ಹೆಚ್ಚು ಉದ್ದದ ರಸ್ತೆಗಳಿಗೆ ಅನುದಾನ ಮಂಜೂರು.

ಜಲಮೂಲಗಳ ರಕ್ಷಣೆ: ಕೆರೆಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕಾಗಿ ಬರೋಬ್ಬರಿ ₹16 ಕೋಟಿ ಮೀಸಲು.

ಸಂಪರ್ಕ ಸೇತುವೆಗಳು: ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 70 ಕಿರು ಸೇತುವೆಗಳು ಹಾಗೂ ಕಾಲು ಸಂಕಗಳ ನಿರ್ಮಾಣಕ್ಕೆ ಮಂಜೂರಾತಿ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ: 30ಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಹಾಗೂ ವಿವಿಧ ಜಾತಿ ಸಂಘಗಳಿಗೆ ಆರ್ಥಿಕ ನೆರವು.

ಮೂಲಸೌಕರ್ಯ: ಬ್ರಹ್ಮೇಶ್ವರ-ಪಟ್ಟಗುಪ್ಪ ರಸ್ತೆ ಅಭಿವೃದ್ಧಿಗೆ ₹7 ಕೋಟಿ, ಆರ್.ಕೆ ರಸ್ತೆ ಮತ್ತು ಹಾಸ್ಟೆಲ್ ರಿಪೇರಿಗೆ ₹70 ಲಕ್ಷ, ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ನಿರ್ಮಾಣ ಹಾಗೂ ಶಾಲಾ ಆವರಣಗಳ ಅಭಿವೃದ್ಧಿ.

ಇಷ್ಟೆಲ್ಲಾ ಕೆಲಸಗಳು ನಡೆಯುತ್ತಿದ್ದರೂ ವಿರೋಧ ಪಕ್ಷದವರು ಕೇವಲ ರಾಜಕೀಯ ದುರುದ್ದೇಶದಿಂದ ಶಾಸಕರ ಏಳಿಗೆಯನ್ನು ಸಹಿಸದೆ ಆರೋಪ ಮಾಡುತ್ತಿದ್ದಾರೆ ಎಂದು ಚಂದ್ರಮೌಳಿ ಕಿಡಿಕಾರಿದರು.

ಫುಡ್‌ಕೋರ್ಟ್‌ಗೆ ತಡೆಯಾಜ್ಞೆ ತಂದವರ ವಿರುದ್ಧ ವಾಗ್ದಾಳಿ :

ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಫುಡ್‌ಕೋರ್ಟ್ ಕಾಮಗಾರಿಗೆ ಬಿಜೆಪಿ ಸದಸ್ಯರೊಬ್ಬರು ತಡೆಯಾಜ್ಞೆ (ಸ್ಟೇ) ತಂದಿರುವುದನ್ನು ಮುಖಂಡರು ಖಂಡಿಸಿದರು. “ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹ ಕೆಲಸ ಮಾಡುವವರು ಪಾಪಿಗಳು. ಒಳಬೀದಿಗಳಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದ ಬಡವರಿಗಾಗಿ ಶಾಸಕರು ಮುಖ್ಯರಸ್ತೆ ಪಕ್ಕ ಜಾಗ ಒದಗಿಸುತ್ತಿದ್ದರೆ, ಅದರಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಸರಿಯಲ್ಲ” ಎಂದರು.

ಶಾಸಕರ ಕೆಲಸ ಸಹಿಸುತ್ತಿಲ್ಲ:

ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಚಿದಂಬರ ಮಾತನಾಡಿ, “ಕಳೆದ ಮೂರೂವರೆ ವರ್ಷಗಳಲ್ಲಿ ಶಾಸಕರು ಮಾಡಿರುವ ಅಭಿವೃದ್ಧಿಯನ್ನು ನೋಡಿ ಬಿಜೆಪಿಯವರಿಗೆ ಹೊಟ್ಟೆಯುರಿ ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಪಟ್ಟಣಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ತಮ್ಮ ಸಂಸದರನ್ನು ಪ್ರಶ್ನಿಸದ ಇವರು, ಸುಮ್ಮನೆ ಶಾಸಕರನ್ನು ಟೀಕಿಸುತ್ತಿದ್ದಾರೆ” ಎಂದು ಸವಾಲು ಹಾಕಿದರು.

2028ಕ್ಕೂ ಬೇಳೂರೇ ಶಾಸಕರು:

ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ, “ಬೇಳೂರು ಗೋಪಾಲಕೃಷ್ಣ ಅವರ ಜನಪರ ಕಾಳಜಿ ಹಾಗೂ ಬಡವರ ಮೇಲಿನ ಪ್ರೀತಿಯಿಂದಾಗಿ 2028ರ ವಿಧಾನಸಭಾ ಚುನಾವಣೆಯಲ್ಲೂ ಅವರೇ ಗೆಲುವು ಸಾಧಿಸಲಿದ್ದಾರೆ. ಟೀಕಾಕಾರರಿಗೆ ಮುಂದಿನ ಚುನಾವಣೆಯೇ ಉತ್ತರ ನೀಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಪ್ರಭಾಕರ್, ಕೋಲ್ಡ್ ಮಂಜುನಾಥ್, ಶುಭಾಕರ, ಜಯನಗರ ಗುರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]