ರಿಪ್ಪನ್ಪೇಟೆ: ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದನ್ನೇ ಬಂಡವಾಳವಾಗಿಸಿಕೊಂಡು ಬಿಜೆಪಿ ಮಾಡುತ್ತಿರುವ ಟೀಕೆಗಳು ಸಂಪೂರ್ಣವಾಗಿ ರಾಜಕೀಯ ದುರುದ್ದೇಶದಿಂದ ಕೂಡಿವೆ ಎಂದು ಕೆರೆಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಈಶ್ವರಪ್ಪ ಕಿಡಿಕಾರಿದ್ದಾರೆ.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹತಾಶೆಯ ಹೇಳಿಕೆ:
ಅಧಿಕಾರ ಕಳೆದುಕೊಂಡಿರುವ ಹತಾಶೆಯಿಂದಾಗಿ ಬಿಜೆಪಿ ನಾಯಕರು ಶಾಸಕ ಬೇಳೂರು ಅವರನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಆತ್ಮಾವಲೋಕನ ಅಗತ್ಯ:
ಹರತಾಳು ಹಾಲಪ್ಪನವರು ಬೇರೆಯವರತ್ತ ಬೊಟ್ಟು ಮಾಡುವ ಮುನ್ನ ತಮ್ಮ ಹಿಂದಿನ ಆಡಳಿತಾವಧಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಗರದ ಕಾಲೇಜೊಂದರಲ್ಲಿ ಅವರು ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಈಗಲೂ ಪ್ರಶ್ನೆಗಳಿವೆ.
ಶಿಕ್ಷಕರ ಬಗ್ಗೆ ನೈಜ ಕಾಳಜಿ ಇರಲಿ:
ಶಾಸಕರು ಕಾರ್ಯಕ್ರಮಕ್ಕೆ ಹೋಗದಿರುವುದನ್ನೇ ಶಿಕ್ಷಕರಿಗೆ ಮಾಡಿದ ಅವಮಾನ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಬಿಜೆಪಿಗೆ ನಿಜವಾಗಿಯೂ ಶಿಕ್ಷಕರ ಮೇಲೆ ಕಾಳಜಿ ಇದ್ದರೆ, ಶಿಕ್ಷಕರ ದಿನಾಚರಣೆಯನ್ನು ರಾಜಕೀಯ ವೇದಿಕೆಯಾಗಿಸುವ ಬದಲು ಶಿಕ್ಷಕರ ನೈಜ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿ.

ಕಾಂಗ್ರೆಸ್ ಎಚ್ಚರಿಕೆ:
ಯಾವುದೇ ಆಧಾರವಿಲ್ಲದೆ ಜನರನ್ನು ದಿಕ್ಕುತಪ್ಪಿಸುವ ಇಂತಹ ವೈಯಕ್ತಿಕ ಟೀಕೆಗಳು ಮುಂದುವರಿದರೆ, ಬಿಜೆಪಿಯ ಆಡಳಿತ ವೈಫಲ್ಯಗಳು ಹಾಗೂ ಹಿಂದಿನ ಹಗರಣಗಳನ್ನು ಜನರ ಮುಂದಿಡಬೇಕಾಗುತ್ತದೆ.
ವಿರೋಧ ಪಕ್ಷದಲ್ಲಿರುವ ಬಿಜೆಪಿ ನಾಯಕರು ಕೇವಲ ಆರೋಪಗಳನ್ನು ಮಾಡುವ ಬದಲು, ತಮ್ಮ ಅಧಿಕಾರದ ಅವಧಿಯಲ್ಲಿನ ಕೆಲಸಗಳಿಗೆ ಮೊದಲು ಲೆಕ್ಕ ಕೊಡಲಿ ಎಂದು ಈಶ್ವರಪ್ಪ ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗಣಪತಿ ಗವಟೂರು, ಆಸಿಫ್ ಭಾಷಾ, ನಿರೂಪ್ ಕುಮಾರ್, ಮಧುಸೂದನ್, ಕೆರೆಹಳ್ಳಿ ರವಿ, ಪ್ರಕಾಶ್ ಪಾಲೇಕರ್, ನವೀನ್, ಬಿಎಸ್ಎನ್ಎಲ್ ಶ್ರೀಧರ್ ಹಾಗೂ ಜಾಕೀರ್ ಮುಂತಾದವರು ಹಾಜರಿದ್ದರು.

