ರಿಪ್ಪನ್ಪೇಟೆ : ದೇಶ ವಿಭಜನೆಯ ಸಂದರ್ಭ ನಡೆದ ಮಾರಣ ಹೋಮದಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಹಿಂದೂ ಸಮಾಜ ತನ್ನ ಇತಿಹಾಸ ಪರಂಪರೆ ಹಾಗೂ ಪೂರ್ವಪರ ಬಲಿದಾನವನ್ನು ಎಂದಿಗೂ ಮರೆಯಬಾರದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಹ ಸಂಯೋಜಕ ಸತೀಶ್ ದಾವಣಗೆರೆ ಕರೆ ನೀಡಿದರು.
ರಿಪ್ಪನ್ಪೇಟೆಯ ಹಿಂದೂ ಜಾಗರಣ ವೇದಿಕೆಯವರು ಪಟ್ಟಣದ ನಾಲ್ಕು ಪ್ರಮುಖ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿ ನಂತರ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ವಿಭಜನೆಯ ಸಂದರ್ಭದಲ್ಲಿ ತಮ್ಮ ತಾಯ್ನಾಡು, ಧರ್ಮ ಹಾಗೂ ಸಂಸ್ಕೃತಿಗಾಗಿ ಅನೇಕರು ಪ್ರಾಣತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದರು.

ಪಂಜಿನ ಮೆರವಣಿಗೆಯಲ್ಲಿ ಭಾರತ್ ಮಾತಾ ಕೀ ಜೈ, ಅಖಂಡ ಹಿಂದೂ ಸ್ಥಾನಕೀ ಜೈ ಹಾಗೂ ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಕೈಯಲ್ಲಿ ಪಂಜುಗಳನ್ನು ಹಿಡಿದು ದೇಶಭಕ್ತಿ ಹಾಗೂ ಅಖಂಡ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು.
ಆಟೋ ಪ್ರಕಾಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಪವನ್ ಶಿರಾಳಕೊಪ್ಪ, ಜಿಲ್ಲಾ ನಿಧಿ ಪ್ರಮುಖ್ ದೇವರಾಜ್ ಕುಷನ್ ಕೆರೆಹಳ್ಳಿ, ಸಂಜಯ್, ತಾಲ್ಲೂಕು ಸಂಚಾಲಕ ರಾಘವೇಂದ್ರ, ಮಂಜುನಾಥ ಆಚಾರ್, ನಾಗರತ್ನ ದೇವರಾಜ್, ರಂಜನ್ ಇನ್ನಿತರರು ಪಾಲ್ಗೊಂಡಿದ್ದರು.

