ಹೊಸನಗರ : ತಾಲ್ಲೂಕಿನ ನೂರಾರು ಕುಟುಂಬಗಳನ್ನು ಬೀದಿಪಾಲು ಮಾಡಿ ಕರ್ನಾಟಕ ರಾಜ್ಯಕ್ಕೆ ವಿದ್ಯುತ್ ನೀಡಿದ ಹೊಸನಗರ ಇಂದು ಕತ್ತಲೆಯಲ್ಲಿ ಮುಳುಗಿದೆ ಎಂದು ಮಾಜಿ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹೊಸನಗರ ತಾಲ್ಲೂಕು ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ಹಾಗೂ ಹೊಸನಗರ ತಾಲ್ಲೂಕನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದು ತಾಲ್ಲೂಕು ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆ ಉದ್ಧೆಶಿಸಿ ಮಾತನಾಡಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1DbNaDsQUa/
ರಾಜ್ಯ ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬಂದು ಸುಮಾರು ಮೂರುವರೆ ವರ್ಷ ಕಳೆದಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಅದು ಅಲ್ಲದೇ ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಖಂಡಿಸುತ್ತಿದೆ. ಆದರೂ ಯಾವುದಕ್ಕೂ ರಾಜ್ಯ ಸರ್ಕಾರ ಬಗ್ಗುತ್ತಿಲ್ಲ. ಜನರು ಈಗಿಂದಲೇ ಎಚ್ಚರಗೊಳ್ಳಬೇಕು. ಮೂರೂವರೆ ವರ್ಷದ ಹಿಂದೆ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈಗ ಜನರು ಬದುಕಲು ಬಿಡಿ ಎನ್ನುವ ಸ್ಥಿತಿಗೆ ತಂದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಗೆ ಮೂರು ತಿಂಗಳು, ಮುಖ್ಯಮಂತ್ರಿಯಾದ ಮೇಲೆ ಸಚಿವ ಸಂಪುಟಕ್ಕೆ ಮೂರು ತಿಂಗಳು ಈಗ ಖಾತೆ ಹಂಚಲು ಎಷ್ಟು ತಿಂಗಳು ತೆಗೆದುಕೊಳ್ಳುತ್ತಾರೂ ಗೊತ್ತಿಲ್ಲ? ಈಗಾಗಲೇ ಜೈಲಿನಿಂದ ಬಂದವರಿಗೆ ಮಂತ್ರಿ ಪದವಿ ನೀಡಿದ್ದು ₹ 187 ಕೋಟಿ ತಿಂದವರಿಗೂ ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿ ಮಾಡಿದ್ದಾರೆ. ಓಟಿನ ರಾಜಕೀಯಕ್ಕಾಗಿ ಕರ್ನಾಟಕದಲ್ಲಿ ನಾಲ್ಕು ಲಕ್ಷ ಬಾಂಗ್ಲ ಪ್ರಜೆಗಳನ್ನು ರಾಜ್ಯದಲ್ಲಿ ಬಿಟ್ಟುಕೊಂಡಿದ್ದಾರೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಬಾಂಬ್ ಸಿಡಿಯುವುದು ಖಚಿತ ಎಂದರು.
ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಮಹಿಳೆಯರಿಗೆ ಕೊಡಲು ಹಣವಿಲ್ಲ ಎಂದು ಹಿಂದಿನ ಹೈದರಾಲಿಯ ಕತೆ ನೆನಪಿಸಿದ್ದಾರೆ ಈ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2018 ಕ್ಕಿಂತ ಮುಂಚೆ ಸುಮಾರು 3200 ಸಾವಿರ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಗೂಂಡ ಕಾಯ್ದೆ ಹಾಕಿದ್ದಾರೆ. ಅದೇ ರೀತಿ ಈಗಲೂ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಆ ಕೆಲಸ ಮಾಡಿದರೆ ಬಿಜೆಪಿ ಪಕ್ಷ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಉಗ್ರ ಹೋರಾಟ ನಡೆಸುತ್ತೇವೆಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ 3500 ಫಲಾನುಭವಿಗಳಿಗೆ ಸುಮಾರು 6 ತಿಂಗಳಿಂದ ಹಣ ಬಂದಿಲ್ಲ. ಪ್ರತಿ ತಿಂಗಳು 35 ಲಕ್ಷ ಹಣವನ್ನು ಒಂದು ತಾಲ್ಲೂಕಿನಿಂದ ಉಳಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗುತ್ತಿದೆ. ಹೊಸನಗರ ಕ್ಷೇತ್ರದ ಶಾಸಕರು ಸಚಿವ ಸ್ಥಾನದ ಲಾಬಿಗಾಗಿ ಬೆಂಗಳೂರು – ಡೆಲ್ಲಿ ಸುತ್ತುತ್ತಿದ್ದಾರೆ. ಇತಿಹಾಸದಲ್ಲಿ ಮಹಿಳಾ ಮಂತ್ರಿ ಮಂಡಲವಿಲ್ಲದ ಈ ಸರ್ಕಾರವಾಗಿದೆ. ಬೆಳೆ ಪರಿಹಾರವಿಲ್ಲ. ಮಳೆಮಾಪನ ಸರಿಯಿಲ್ಲ. ಸಚಿವರಾಗುವ ಆಸೆಯಲ್ಲಿ ಸಾಗರದಲ್ಲಿ ಒಂದು ಬಾವಿಯನ್ನು ಮುಚ್ಚಿದ್ದಾರೆ. ಆದರೂ ಸಚಿವರಾಗಿಲ್ಲ. ಹೊಸನಗರ ಕ್ಷೇತ್ರ ಸಂಪೂರ್ಣ ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನರು ಎಚ್ಚರಗೊಂಡರೆ ಮಾತ್ರ ಸರ್ಕಾರ ಹಾಗೂ ಶಾಸಕರನ್ನು ಎಚ್ಚರಿಸಬಹುದು ಎಂದರು.

ತಾಲ್ಲೂಕು ಮಂಡಲದ ಅಧ್ಯಕ್ಷ ಸತೀಶ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಸುಮಾರು 35 ಸಾವಿರ ಪಿಂಚಣಿ ರದ್ದುಪಡಿಸಿದ್ದು ಜೊತೆಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಇದು ವೃದ್ಧರು, ಅಂಗವಿಕರು ಹಾಗೂ ವಿಧವೆಯರ ಹೊಟ್ಟೆ ಮೇಲೆ ಈ ರಾಜ್ಯ ಸರ್ಕಾರ ಹೊಡೆಯುತ್ತಿದೆ. ಕೆಲವರು ಒಂದು ತುತ್ತು ಅನ್ನಕ್ಕೂ ಪರದಾಟ ಪಡುವಂತೆ ರಾಜ್ಯ ಸರ್ಕಾರ ಮಾಡಿದೆ. ತಡೆಹಿಡಿದಿರುವ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು, ಜೊತೆಗೆ ಗ್ರಾಮ ಪಂಚಾಯತಿ ಮೀಸಲಾತಿಯಲ್ಲಿ ಶಾಸಕರಿಗೆ ಬೇಕಾದಂತೆ ಮೀಸಲಾತಿ ಸ್ಥಾನಗಳನ್ನು ಕಲ್ಪಿಸಲಾಗಿದೆ. ಅವೈಜ್ಞಾನಿಕವಾಗಿರುವ ಗ್ರಾಮ ಪಂಚಾಯತಿ ಮೀಸಲಾತಿಯನ್ನು ಮರುಪರಿಶೀಲಿಸಬೇಕು. ಹದಗೆಟ್ಟಿರುವ ಮಳೆಮಾಪನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ರೈತರಿಗೆ ಬೆಳೆವಿಮೆ ಸಿಗುವಂತೆ ಅನುಕೂಲ ಮಾಡಿಕೊಡಬೇಕು. ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳನ್ನು ಸರಿಪಡಿಸಬೇಕು. ರೈತರಿಗೆ ಕೃಷಿ ಮತ್ತು ನೀರಾವರಿಗೆ ಸಬ್ಸಿಡಿ ನೀಡಬೇಕು. ಮೂರುವರೆ ವರ್ಷದಲ್ಲಿ ಆಡಳಿತದಲ್ಲಿ ಭ್ರಷ್ಟಚಾರ ಮತ್ತು ಕಮಿಷನ್ ದಂಧೆ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ತಾಲ್ಲೂಕಿನಲ್ಲಿ ಖಾಲಿಯಿರುವ ಪಶು ವೈದ್ಯರು ಹಾಗೂ ನೀರಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ತಾಲ್ಲೂಕಿನಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡಬೇಕು ಸಾಗರ ಕ್ಷೇತ್ರದ ಶಾಸಕರು ಹೊಸನಗರ ಭಾಗಕ್ಕೆ ಯಾವುದೇ ತಾರತಮ್ಯ ಎಸಗದೆ ಆದ್ಯತೆ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದರು.

ಈ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಆರ್.ಟಿ ಗೋಪಾಲ್, ಎನ್.ಆರ್ ದೇವಾನಂದ್ ಮಾತನಾಡಿದರು. ಎಂ.ಎನ್ ಸುಧಾಕರ್, ಸಾಗರ ಪ್ರಶಾಂತ್, ಶ್ರೀಮತಿರಾವ್, ಗಣಪತಿ ಬೆಳಗೋಡು, ಹಾಲಗದ್ದೆ ಉಮೇಶ್, ಬಿ ಯುವರಾಜ್, ತೀಥೇಶ್, ಆಲವಳ್ಳಿ ವೀರೇಶ್, ಅಬ್ಬಿ ಕಿರಣ್, ಸತ್ಯನಾರಾಯಣ, ಮಂಡಾನಿ ಮೋಹನ್, ವಿಜಯಕುಮಾರ್, ಎ.ವಿ. ಮಲ್ಲಿಕಾರ್ಜುನ, ಸುರೇಶ್ ಸ್ವಾಮಿರಾವ್, ನಾಗರತ್ನ ದೇವರಾಜ್, ವಿಜಯ, ಮಂಜುನಾಥ್ ಸಂಜೀವ, ಚಿಕ್ಕನಕೊಪ್ಪ ಶ್ರೀಧರ, ಕೃಷ್ಣವೇಣಿ, ಗಾಯಿತ್ರಿ ನಾಗರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್, ರಾಜೇಶ್, ಉಮೇಶ್, ಮನೋಜ್ ಪೂಜಾರಿ, ಚಾಲುಕ್ಯ ಬಸವರಾಜ್, ನಿರ್ಮಾಲ ಗಣೇಶ್, ಕಾವ್ಯ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.