ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಮಠಾಧೀಶರು ಒಂದಾಗಬೇಕಾಗಿದೆ ; ರಾಜಶೇಖರ್
ಹೊಸನಗರ: 30 ವರ್ಷಗಳಿಂದ ಮಲೆನಾಡು ವೀರಶೈವರ ಮುಗ್ದತೆಯನ್ನು ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಕಲಿಸಬೇಕಾಗಿದೆ ಎಂದು ಮಲೆನಾಡು ಜಾಗ್ರತ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗನಕೊಪ್ಪ ರಾಜಶೇಖರ್ ಮಲ್ಲವ ಜನಾಂಗದವರಿಗೆ ಕರೆ ನೀಡಿದರು.
ಅವರು ಹೊಸನಗರದ ಗಂಗಾನಕೊಪ್ಪದ ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಸೊರಬ, ಸಾಗರ, ತೀರ್ಥಹಳ್ಳಿ ಮತ್ತು ಶಿವಮೊಗ್ಗ ಕ್ಷೇತ್ರ ಹೀಗೆ ಜಿಲ್ಲೆಯಲ್ಲಿ ವೀರಶೈವ ಒಳ ಪಂಗಡದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವ ಮಲ್ಲವ ವೀರಶೈವರನ್ನು ಜಿಲ್ಲೆಯಲ್ಲಿ ಪಕ್ಷ ಬೆಳೆಯಲು, ಸಮಾಜ ಮುಖಂಡರನ್ನು ಬಳಸಿಕೊಂಡು ಅವರ ನಾಯಕತ್ವವನ್ನು ಎಲ್ಲಾ ತಾಲ್ಲೂಕುಗಳಲ್ಲಿ ನಾಶ ಮಾಡಿದ ಕೀರ್ತಿ ಬಿ.ಜೆ.ಪಿ. ಗೆ ಸಲ್ಲುತ್ತದೆ. ಕೆಲವೇ ಸಾವಿರ ಜನಸಂಖ್ಯೆ ಇರುವ ಸಮಾಜ ಭಾಂದವರಿಗೆ ವಿಧಾನ ಪರಿಷತ್ ಸ್ಥಾನ ಮತ್ತು ನಿಗಮ ಮಂಡಳಿ ಸ್ಥಾನ ನೀಡುವ, ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿ ಇರುವ ನಮಗೆ ಯಾವುದೇ ಸ್ಥಾನಮಾನ ನೀಡದಿರುವುದು ನಮ್ಮ ಸಮಾಜ ದೌರ್ಭಾಗ್ಯದ ಸಂಗತಿಯಾಗಿರುತ್ತದೆ.
ನಮ್ಮ ಸಹಕಾರದಿಂದ ಗೆದ್ದಂತ ವ್ಯಕ್ತಿಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ, ನಾಶ ಮಾಡುತ್ತಿದ್ದರೂ, ಯಾವ ಒಬ್ಬ ಮಠಾಧೀಶರಾಗಲೀ, ಸಮಾಜದಲ್ಲಿರುವ ಬುದ್ದಿ ಜೀವಿಗಳಾಗಲೀ ಖಂಡಿಸದಿರುವುದು ದುಃಖದ ವಿಚಾರವಾಗಿದೆ. ಇನ್ನಾದರೂ ಮಠಾಧೀಶ ಪರಿಷತ್ತಿನ ಅಧ್ಯಕ್ಷರು ಮಲೆನಾಡಿನಲ್ಲಿರುವ ಮಠಾಧೀಶರನ್ನು ಮತ್ತು ಸಮಾಜದ ಬಗ್ಗೆ ಕಳಕಳಿ ಇರುವ ಮುಖಂಡರನ್ನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮುಖಂಡರ ಸಭೆ ಕರೆದು ಮಾರ್ಗದರ್ಶನ ಮಾಡದಿದ್ದಲ್ಲಿ ತಮ್ಮನ್ನು ತಾವು ವಂಚಿಸಿಕೊಳ್ಳುವುದ ಜೊತೆಗೆ ನಾಯಕತ್ವ ಇಲ್ಲದ ಸಮಾಜಕ್ಕೆ ದ್ರೋಹ ಬಗೆದಂತೆ. ಸಮಾಜದಲ್ಲಿರುವ ಮುಗ್ದರು ಮತ್ತು ಇಂದಿನ ಯುವ ಪೀಳಿಗೆಯವರ ಶಾಪ ಮತ್ತು ನಿಂದನೆಗೆ ಒಳಗಾಗಬೇಕಾಗುತ್ತದೆ ಎಂದರು.