ತೀರ್ಥಹಳ್ಳಿ ; ಮಂಗನಕಾಯಿಲೆಯಿಂದ ಬಳಲುತ್ತಿದ್ದ ಬಾಲಕನೋರ್ವ ಸಾವನ್ನಪ್ಪಿದ್ದು ಇದು ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷದ ಎರಡನೇ ಪ್ರಕರಣವಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದತ್ತರಾಜಪುರ ಗ್ರಾಮದ ರಾಮು ಮತ್ತು ಸವಿತಾ ದಂಪತಿಯ ಪುತ್ರ ರಚಿತ್ ಡಿ.ಆರ್.(08) ಸಾವನ್ನಪ್ಪಿದ ಬಾಲಕ. ಕಳೆದ 15 ದಿನಗಳ ಹಿಂದೆ ರಚಿತ್ ಮತ್ತು ಆತನ ಸಹೋದರಿಗೆ ಸೋಂಕು ದೃಢಪಟ್ಟಿತ್ತು. 4 ದಿನಗಳ ಕಾಲ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚೇತರಿಸಿಕೊಂಡ ಸಹೋದರಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್ ಚಿಕಿತ್ಸೆ ಫಲಿಸದೆ ತಡರಾತ್ರಿ 8:30ರ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪಿದ್ದು ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಚಿತ್ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದನು.
ತೀರ್ಥಹಳ್ಳಿ ತಾಲೂಕಿನ ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಕೆಎಫ್ಡಿ ಸೋಂಕಿನಿಂದ ಕಳೆದ ಫೆಬ್ರವರಿ ತಿಂಗಳಲ್ಲಿ ಸಾವನ್ನಪ್ಪಿದ್ದರು, ಇದು ಜಿಲ್ಲೆಯ ಈ ವರ್ಷದ ಮೊದಲ ಪ್ರಕರಣವಾಗಿತ್ತು.