ಸಾಗರ

ಸಾಗರ ; 94ಸಿ, 94ಸಿಸಿ ಹಕ್ಕುಪತ್ರ ವಿತರಣೆ – ಅಭಿವೃದ್ಧಿ ಕಾಮಗಾರಿಗಳಿಗೆ ಉಸ್ತುವಾರಿ ಸಚಿವರಿಂದ ಚಾಲನೆ

ಸಾಗರ ; ತಾಲ್ಲೂಕಿನಲ್ಲಿ ಅಕ್ರಮ-ಸಕ್ರಮ‌ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕುಪತ್ರಗಳನ್ನು ವಿತರಿಸುತ್ತಿರುವುದು ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸೋಮವಾರ ಸಾಗರ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಮೂರನೇ ಮಹಡಿಯಲ್ಲಿ ಶೀಟ್ ಛಾವಣಿ ಹಾಗೂ ಇತರೆ ಮೂಲಭೂತ ಸೌಕರ್ಯ ಕಾಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಪಟ್ಟಣದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಸಾಗರ ತಾಲ್ಲೂಕಿನ ಸುಮಾರು 8 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. 94ಸಿ ಮತ್ತು 94ಸಿಸಿ 158 ಜನರಿಗೆ ಹಕ್ಕುಪತ್ರ ವಿತರಣೆ, ಪೋಷಣ್ ಅಭಿಯಾನದಡಿ 98 ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿ ವಿತರಣೆಗೆ, ಜಂಬಗಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ ರೂ. ಮೊತ್ತದ 6 ಕೊಠಡಿಗಳಿಗೆ ಕಾಮಗಾರಿ, ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರಿಗೆ 66 ಸೋಲಾರ್ ಲೈಟ್ಗಳನ್ನು ನೀಡುತ್ತಿರುವುದು ಹಾಗೂ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 7 ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿತುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಮಹತ್ವದ ಸಭೆ ನಡೆಸಲಾಗಿದೆ ಎಂದರು.

ಕಳೆದ ಬಾರಿಗಿಂತ ಎಸ್ಎಸ್ಎಲ್ಸಿಯಲ್ಲಿ ಶೇ. 8.5 ಹೆಚ್ಚಿಗೆ ಫಲಿತಾಂಶ ಬರುವ ಮೂಲಕ ಉತ್ತಮ ಫಲಿತಾಂಶ ಬಂದಿದ್ದು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಧನ್ಯವಾದಗಳು ಎಂದ ಅವರು, ಶಾಲೆಗಳು ಉದ್ದಾರವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಾಲ್ಲೂಕು ಆಡಳಿತ ಸೌಧದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ರೂ. 4 ಕೋಟಿ ಕಾಮಗಾರಿ, ಸೋಲಾರ್ ಲೈಟ್ ವಿತರಣೆ, ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿ ವಿತರಣೆ, ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿರುವುದು ಸಂತಸದ ವಿಷಯ.

ಯುಜಿಡಿ ಕಾಮಗಾರಿಗೆ ರೂ. 20 ಕೋಟಿ ಬಿಡುಗಡೆ ಮಾಡಿದ್ದೇನೆ. ಸರ್ಕಾರಿ ಪ್ರ.ದ.ಕಾಲೇಜು ಕೊಠಡಿ ನಿರ್ಮಾಣಕ್ಕೆ ರೂ.2 ಕೋಟಿ , 158 ಜನರಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿರುವುದು, ಅಂಗನವಾಡಿ ಕೇಂದ್ರಗಳಿಗೆ ಎಲ್ಇಡಿ ಟಿವಿ ವಿತರಣೆ ಮಾಡುತ್ತಿರುವು ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿರುವು ಹೆಮ್ಮೆಯ ವಿಚಾರ.

ತಾಲ್ಲೂಕಿನ 5 ವರ್ಷದ ಅಭಿವೃದ್ಧಿ ಬಗ್ಗೆ ಯೋಚಿಸಿದ್ದೇನೆ. ನಗರ ರಸ್ತೆ ಅಗಲೀಕರಣ, ಮಾರ್ಕೆಟ್ ರಸ್ತೆ ಅಗಲೀಕರ ಮಾಡುತ್ತೇವೆ. ನಗರದ ಜನರಿಗೆ 24 ಗಂಟೆ ಕುಡಿಯುವ ನೀರಿಗೆ ರೂ. 250 ಕೋಟಿ ಯೋಜನೆ ತಯಾರಾಗಿದೆ.‌ ಮನೆ ಮನೆಗೆ ನೀರು ಒದಗಿಸಲಾಗುವುದು.‌ ಮಕ್ಕಳ ಆಸ್ಪತ್ರೆಗೆ ರೂ. 1.65 ಕೋಟಿ ವೆಚ್ಚದಲ್ಲಿ ಹೈಟೆಕ್ಗೊಳಿಸಲಾಗುವುದು, ಸಾರ್ವಜನಿಕ ಆಸ್ಪತ್ರೆಗೆ 1.75 ರೂ. ನೀಡಲಾಗಿದೆ.‌ ತಾಲ್ಲೂಕು ಆಸ್ಪತ್ರೆ ಅಪ್ ಗ್ರೇಡ್ ಮಾಡಲು ರೂ.‌70 ಲಕ್ಷ ಸರ್ಕಾರ ನೀಡಿದೆ .ನಗರದಲ್ಲಿ ರವೀಂದ್ರನಾಥ ಟ್ಯಾಗೋರ್ ರಂಗಮಂದಿರ ನಿರ್ಮಿಸಲು ರೂ. 13 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀನಾಸಂ ಅಭಿವೃದ್ದಿಗೆ ರೂ.1 ಕೋಟಿ ನೀಡಲಾಗುತ್ತಿದೆ. ಫುಡ್ ಕೋರ್ಟ್, ಪ್ರತಿ ವಾರ್ಡ್ ಪಾರ್ಕ್ ಮಾಡಲಾಗುವುದು. ಶರಾವತಿ ಮುಳುಗಡೆ ಪ್ರದೇಶಗಳಲ್ಲಿ ಕಾಲುಸಂಕಗಳಿಗೆ 40 ರಿಂದ 50 ಕೋಟಿ ನೀಡುವ ಭರವಸೆ ಸರ್ಕಾರ ನೀಡಿದೆ ಎಂದ ಅವರು ತಾಲ್ಲೂಕಿನಲ್ಲಿ ಯಾವುದೇ ಮೂಲಭೂತ ಸೌಕರ್ಯಕ್ಕೆ ಕೊರತೆ ಮಾಡುವುದಿಲ್ಲವೆಂದರು.‌

ಕಾರ್ಯಕ್ರಮದಲ್ಲಿ ಮುಖಂಡರಾದ ಜಯಂತ್, ತಹಸೀಲ್ದಾರ್ ಚಂದ್ರಶೇಖರ್, ಸೇರಿದಂತೆ ವಿವಿಧ ಮುಖಂಡರುಗಳ ಉಪಸ್ಥಿತರಿದ್ದರು.

Leave a Comment