ಹೊಸನಗರ : ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ನಿಂತರೂ ಮೂರು ವರ್ಷಗಳಿಂದ ಪಟ್ಲ ಫೌಂಡೇಶನ್ ಅಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಯಕ್ಷಗಾನ ತರಬೇತಿ ನಿಲ್ಲುವುದಿಲ್ಲ ಎಂದು ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್ ಹೇಳಿದರು.
ಇಲ್ಲಿನ ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ಆವರಣದಲ್ಲಿ ಉಚಿತ ಯಕ್ಷಗಾನ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ಕಲೆ ಎಂಬುವುದು ಹುಟ್ಟಿನಿಂದ ಬರುವುದಿಲ್ಲ. ಅದು ಬೆಳೆಯುತ್ತಾ ಬೆಳೆಯುತ್ತಾ ಬರುವಂತಹ ಕಲೆಯಾಗಿದೆ. ಈ ಕಲೆಗೆ ನೂರಾರು ವರ್ಷಗಳ ಇತಿಹಾಸವಿದ್ದು ಈ ಕಲೆಯನ್ನು ಬೆಳೆಸಬೇಕಾದರೆ ಸಾವಿರಾರು ಕಲಾವಿದರ ಶ್ರಮವಿದೆ. ಇದು ಪ್ರಾಚೀನ ಕಲೆಯಾಗಿದ್ದು ಪ್ರತಿಯೊಬ್ಬರು ಯಕ್ಷಗಾನ ಕಲಿಯಿರಿ ಕಲಿತು ಬೆಳೆಸುವುದರ ಜೊತೆಗೆ ನಾಡಿಗೆ ಇದರ ಸೊಬಗನ್ನು ಹೆಚ್ಚಿಸಿರಿ ಎಂದರು.
ಪಟ್ಲ ಫೌಂಡೇಶನ್ ನೂರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ : ನಗರ ರಾಘವೇಂದ್ರ
ಪಟ್ಲ ಫೌಂಡೇಶನ್ ಸಂಸ್ಥೆ ಯಕ್ಷಗಾನ ಕಲೆಯನ್ನು ಉಳಿಸುವ ಸಲುವಾಗಿ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ರಾಜ್ಯದಲ್ಲಿ ನೂರಾರು ಕೋಟಿ ಹಣವನ್ನು ಖರ್ಚು ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ಕಲಿಸುತ್ತಿದ್ದು ಇದರ ಉಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಾಗಿದೆ ಎಂದು ಮಲೆನಾಡು ವಾಯ್ಸ್ ಪತ್ರಿಕೆ ಸಂಪಾದಕ ನಗರ ರಾಘವೇಂದ್ರ ಹೇಳಿದರು.

ಯಕ್ಷಗಾನ ಉಳಿಸಿ ಬೆಳೆಸಿ : ಸುಧೀಂದ್ರ ಪಂಡಿತ್
ನೂರಾರು ವರ್ಷಗಳಿಂದ ಇತಿಹಾಸ ನಿರ್ಮಿಸಿಕೊಂಡು ಬರುತ್ತಿರುವ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯದ್ದಾಗಿದ್ದು ಅವರು ಉಳಿಸಿ ಬೆಳೆಸಿದರೆ ಯಕ್ಷಗಾನ ಕಲೆ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಸುಧೀಂದ್ರ ಪಂಡಿತ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ, ರಾಮಕೃಷ್ಣ ವಿದ್ಯಾ ಶಾಲೆಯ ಮುಖ್ಯೋಪಾಧ್ಯಯ ರಾಜೇಶ್, ಗೌತಮ್ ಕುಮಾರಸ್ವಾಮಿ, ಪತ್ರಕರ್ತ ಎಂ.ಕೆ. ವೆಂಕಟೇಶ್ಮೂರ್ತಿ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.