ಚಿಕ್ಕಮಗಳೂರು ; ಬಾರ್ನಲ್ಲಿ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಹಳೆಯ ಪ್ರೀತಂ ಬಾರ್ನಲ್ಲಿ ನಡೆದಿದೆ.
ತೇಜು (40) ಮೃತ ದುರ್ದೈವಿ. ಇಲ್ಲಿನ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಬಾರ್ನಲ್ಲಿ ನಡೆದ ಕ್ಷುಲ್ಲಕ ಕಾರಣದ ಗಲಾಟೆ ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ.
ಆರೋಪಿಗಳಾದ ಬಿಹಾರಿ ಕಾರ್ಮಿಕರು ಯುವಕನಿಗೆ ಮನಬಂದಂತೆ ಹೊಡೆದು ಜರ್ಜರಿತಗೊಳಿಸಿದ ನಂತರ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಪಟಾಕಿ ಮೈದಾನಕ್ಕೆ ಎಸೆದು ಪರಾರಿಯಾಗಿದ್ದರು. ಇಂದು ಮುಂಜಾನೆ ಆಟೋ ಚಾಲಕರೊಬ್ಬರು ಮೈದಾನದಲ್ಲಿ ಬಿದ್ದಿರುವುದನ್ನು ಗಮನಿಸಿದಾಗ ಆತ ಇನ್ನೂ ಉಸಿರಾಡುತ್ತಿದ್ದದ್ದು ಕಂಡುಬಂದಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ ಕಿಡಿಗೇಡಿಗಳ ತೀವ್ರ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ತೇಜು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.