ರಿಪ್ಪನ್ಪೇಟೆ ; ಹೆದ್ದಾರಿಪುರ ಗ್ರಾ.ಪಂ. ವ್ಯಾಪ್ತಿಯ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡರಾತ್ರಿ ನಡೆದಿದೆ.
ಮೃತನನ್ನು ಕೊಳವಳ್ಳಿ ಗ್ರಾಮದ ಸುನೀಲ್ ಬಿನ್ ವೀರಭದ್ರ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸುನೀಲ್, ನಂತರ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಸುಮಾರು 5 ಗಂಟೆಗೆ ಹೊರಟಿದ್ದನು. ರಾತ್ರಿ 11 ಗಂಟೆಗೆ ಮನೆಗೆ ವಾಪಸ್ಸು ಬಂದಿದ್ದಾನೆ.

ಈ ವೇಳೆ ಅವನು ಮದ್ಯಪಾನ ಮಾಡಿದ್ದನೆಂದು ತಿಳಿದುಬಂದಿದೆ ಮನೆಗೆ ಬಂದ ನಂತರ ತಂದೆ-ತಾಯಿಯವರೊಂದಿಗೆ ಮಾತನಾಡಿ, ಮನೆಯ ಹೊರಭಾಗದ ಜಗುಲಿಯಲ್ಲಿ ಕೆಲಕಾಲ ಮಾತನಾಡುತ್ತಾ ಕುಳಿತಿದ್ದಾನೆ. ಬಳಿಕ ತಂದೆ ಮಲಗಲು ತೆರಳಿದ ನಂತರ, ಸುನೀಲ್ ಮನೆಯೊಳಗೆ ಹೋಗಿದ್ದಾನೆ. ಇದೇ ವೇಳೆ ಹೊರಗೆ ಮಾತನಾಡುತ್ತಿದ್ದ ಅಣ್ಣ ಸುಮಂತ್ ಹಾಗೂ ತಾಯಿ ಸುಮಾರು 11:30ರ ವೇಳೆಗೆ ಒಳಗೆ ಹೋಗಿ ನೋಡಿದಾಗ, ಮನೆಯ ಹಾಲ್ನಲ್ಲಿದ್ದ ಕಬ್ಬಿಣದ ರಾಡಿಗೆ ನೈಲಾನ್ ಬೆಡ್ಶೀಟ್ ಬಳಸಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಲೇಖನವನ್ನು ಮುಂದುವರಿಸಿ ಓದಿ
ತಕ್ಷಣವೇ ನೇಣಿನಿಂದ ಕೆಳಗಿಳಿಸಿ ಪಕ್ಕದ ಮನೆಯವರ ಸಹಾಯದಿಂದ ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ನಂತರ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಕುಟುಂಬದವರ ಪ್ರಕಾರ, ಸುನೀಲ್ ಹೆಚ್ಚು ಮದ್ಯಪಾನ ಮಾಡುತ್ತಿದ್ದುದರಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದನು ಎಂದು ಹೇಳಲಾಗಿದೆ.
ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

