ರಿಪ್ಪನ್ಪೇಟೆ ; ಲಾರಿ ಮೈಮೇಲೆ ಹರಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಎಂಬಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.

ಮೃತನನ್ನು ಗರ್ತಿಕೆರೆ ಸಮೀಪದ ಎಣ್ಣೆನೊಡ್ಲು ಗ್ರಾಮದ ನಯಾಜ್ (40) ಎಂದು ಗುರುತಿಸಲಾಗಿದೆ. ಸುಣ್ಣದಬಸ್ತಿ ಬಸ್ ನಿಲ್ದಾಣದ ಬಳಿ ರಿಪ್ಪನ್ಪೇಟೆಯಿಂದ ಕೋಣಂದೂರು ಕಡೆಗೆ ಸಾಗುತ್ತಿದ್ದ ಜಂಬಿಟ್ಟಿಗೆ (ಕೆಂಪುಕಲ್ಲು) ತುಂಬಿದ ಲಾರಿ ನಯಾಜ್ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆಳಿಗ್ಗೆ ನಯಾಜ್ ಪತ್ನಿಯನ್ನು ಬೈಕ್ನಲ್ಲಿ ಕರೆದುಕೊಂಡು ಬಂದು ಬಸ್ ನಿಲ್ದಾಣದಲ್ಲಿ ಬಿಟ್ಟು, ಆಯನೂರು ಬಸ್ಗೆ ಕಳುಹಿಸಿದ್ದ. ನಂತರ ತೀರ್ಥಹಳ್ಳಿ ಸಮೀಪದ ಆರಗ ಗೇಟ್ನಲ್ಲಿ ವಾಸಿಸುವ ಚಿಕ್ಕಪ್ಪನಿಗೆ ಔಷಧಿ ಕಳುಹಿಸಲು ಸಾಗರದಿಂದ ಬರುತ್ತಿದ್ದ ಪ್ರಕಾಶ್ ಟ್ರಾವೆಲ್ಸ್ ಬಸ್ಗೆ ಪಾರ್ಸಲ್ ನೀಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು ಘಟನೆಯಲ್ಲಿ ನಯಾಜ್ ದೇಹದ ಸೊಂಟದ ಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಪತ್ನಿ, 11 ವರ್ಷದ ಹೆಣ್ಣು ಮಗಳು, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ನಯಾಜ್ ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಪಿಎಸ್ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

