ಶಿವಮೊಗ್ಗ, ಆಗಸ್ಟ್ 7: ಬೆಂಗಳೂರಿನಿಂದ ಸಿಗಂದೂರು ದೇವಿ ದರ್ಶನಕ್ಕೆ ತೆರಳುತ್ತಿದ್ದ ಆರು ಮಂದಿ ಸ್ನೇಹಿತರಿದ್ದ ಕಾರು ಚೋರಡಿ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಆರು ಮಂದಿ ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ಸಿಗಂದೂರು ಕಡೆ ಪ್ರಯಾಣಿಸುತ್ತಿದ್ದರು. ಚೋರಡಿ ಬ್ರಿಡ್ಜ್ ಸಮೀಪ ರಸ್ತೆ ಬದಿಯ ಡಿವೈಡರ್ಗೆ ಕಾರು ಡಿಕ್ಕಿಯಾಗಿ, ನಿಯಂತ್ರಣ ಕಳೆದುಕೊಂಡು ಮೂರು ಬಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಸಾಗರ ಪೇಟೆ ಠಾಣೆ ಪೊಲೀಸರಿಗೆ ತಪ್ಪಿದ ಅಪಾಯ
ಇದೇ ವೇಳೆ ಕರ್ತವ್ಯದ ನಿಮಿತ್ತ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಸಾಗರ ಪೇಟೆ ಠಾಣೆ ಪೊಲೀಸ್ ಸಿಬ್ಬಂದಿಯ ವಾಹನ ಇದೇ ಮಾರ್ಗದಲ್ಲಿ ಸಾಗುತ್ತಿತ್ತು.
ಅಪಘಾತ ಸಂಭವಿಸಿದ ಸ್ಥಳಕ್ಕೆ ಒಂದೆರಡು ನಿಮಿಷ ಮುಂಚಿತವಾಗಿ ತಲುಪಿದ್ದರೆ, ಪಲ್ಟಿಯಾದ ಕಾರು ತಮ್ಮ ವಾಹನಕ್ಕೂ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎಂದು ಎಎಸ್ಐ ಮೀರಾಬಾಯಿ ತಿಳಿಸಿದ್ದಾರೆ.
ಗಾಯಾಳುಗಳ ನೆರವಿಗೆ ಧಾವಿಸಿದ ಪೊಲೀಸರು
ಅಪಘಾತದ ಬಳಿಕ ಕಾರಿನಲ್ಲಿದ್ದವರು ನೆರವಿಗಾಗಿ ಕೂಗಿಕೊಂಡಿದ್ದು, ಎಎಸ್ಐ ಮೀರಾಬಾಯಿ ಹಾಗೂ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕಿಳಿದು ಗಾಯಾಳುಗಳನ್ನು ಕಾರಿನಿಂದ ಹೊರತೆಗೆದಿದ್ದಾರೆ.
ಬಳಿಕ ಗಾಯಾಳುಗಳನ್ನು ಇನೋವಾ ವಾಹನ ಹಾಗೂ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ಕಾರಿನಲ್ಲಿ ಇಬ್ಬರು ವಕೀಲರೂ ಇದ್ದರು ಎನ್ನಲಾಗಿದೆ.
ಇಬ್ಬರ ಸ್ಥಿತಿ ಗಂಭೀರ
ಒಟ್ಟು ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಉಳಿದ ನಾಲ್ವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಿಖರ ಕಾರಣ ಹಾಗೂ ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.