ಹೊಸನಗರ ; ತಾಲೂಕಿನ ಮೇಲಿನಬೆಸಿಗೆ ಸಮೀಪದ ರಾಮಚಂದ್ರಾಪುರ ಗ್ರಾಮಕ್ಕೆ ಸೇರಿದ ನೂರುಲ್ ಹುದಾ ಜುಮ್ಮಾ ಮಸೀದಿ ಮತ್ತು ಅರಬಿಕ್ ಮದರಸಕ್ಕೆ ಸಂಬಂಧಿಸಿದಂತೆ ನಡೆದ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ರಾಮಚಂದ್ರಪುರ ಗ್ರಾಮ ಪಂಚಾಯತಿ ಸದಸ್ಯ ಆದಿಲ್ ಸೇರಿದಂತೆ ಹಲವು ಮುಸ್ಲಿಂ ಸಮಾಜದ ಬಾಂಧವರು ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿಲ್, 2021-22ನೇ ಸಾಲಿನಲ್ಲಿ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಮಸೀದಿಯ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಬಿಡುಗಡೆ ಆಗಿತ್ತು. ಈ ಕುರಿತು ದಾವಣಗೆರೆಯ ನಿಶಾ ಅಸೋಸಿಯೇಟ್ಸ್ ಮೂಲಕ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿತ್ತು. ಸ್ವತಃ ಮಸೀದಿಯ ಆಡಳಿತ ಸಮಿತಿಯೇ ಕಾಮಗಾರಿ ಕೈಗೊತ್ತಿಕೊಂಡು ಕಾಂಪೌಂಡ್ ನಿರ್ಮಾಣ ಪೂರ್ಣಗೊಳಿಸಿದೆ. ಈ ಕುರಿತು ಈಗಾಗಲೇ ಕಾಮಗಾರಿಯ ಸಂಪೂರ್ಣ ಹಣವನ್ನು ಓಚರ್ ಮೂಲಕ ಡ್ರಾ ಮಾಡಲಾಗಿದೆ. ಆದರೆ, ಕಾಮಗಾರಿ ನಿರ್ವಹಣೆಗಾಗಿ ರಾಜ್ಯ ವಕ್ಫ್ ಬೋರ್ಡ್ನಿಂದ 2022ರ ಡಿ.30 ರಂದು ಅನುದಾನದ 5 ಲಕ್ಷ ರೂ. ಮೊದಲ ಚೆಕ್ ಬಿಡುಗಡೆ ಆಗಿದ್ದು, ದಾನಿಯೊಬ್ಬರೂ 42 ಸಾವಿರ ರೂ. ಮೌಲ್ಯದ ಸ್ಟೀಲ್ ಹೊಸ ಗೇಟನ್ನು ಉದಾರವಾಗಿ ದಾನ ನೀಡಿದ್ದಾರೆ. ಆದರೆ, ಈ ಗೇಟಿಗೆ 91 ಸಾವಿರ ರೂ. ಎಂದು ನಕಲಿ ದಾಖಲೆ ಸೃಷ್ಠಿಸಿದ್ದಾರೆ.
ಮಾಹಿತಿ ಹಕ್ಕು ಅಡಿಯಲ್ಲಿ ಮಸೀದಿ ಆಡಳಿತ ಸಮಿತಿ ನೀಡಿದ ದಾಖಲೆಯಲ್ಲಿ 5,02,779 ರೂ. ಮೊತ್ತದ ಮತ್ತೊಂದು ನಕಲಿ ಬಿಲ್ ಸೃಷ್ಠಿಯಾಗಿದೆ. ನಿಶಾ ಅಯೋಸಿಯೇಟ್ಸ್ ತಯಾರಿಸಿದ ಕಾಂಪೌಂಡ್ ಕಾಮಗಾರಿಯ ಅಂದಾಜು ಪಟ್ಟಿಗಿಂತ ಎರಡು ಪಟ್ಟು ಬಿಲ್ ದುಬಾರಿ ಡ್ರಾ ಮಾಡಲಾಗಿದೆ. ಈ ಸಂಬಂಧ ಜಮಾತಿನ ಸದಸ್ಯರು ಆಯ-ವ್ಯಯ ಕುರಿತು ಲೆಕ್ಕಾಚಾರ ನೀಡುವಂತೆ ಮಸೀದಿಯ ಆಡಳಿತ ಸಮಿತಿಗೆ ಹಾಗೂ ಅಕ್ರಮ ತಡೆಯುಲು ಕೂಡಲೇ ಮಧ್ಯ ಪ್ರವೇಶಿಸಿ ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಈ ಕಾರಣಕ್ಕೆ ಸಮಿತಿಯ ಓರ್ವ ಸದಸ್ಯ ಮಹಮ್ಮದ್ ಸರೂಫ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಸೀದಿಯ ಆಡಳಿತ ಸಮಿತಿಯು ಕಾನೂನಾತ್ಮಕವಾಗಿ ರಚನೆಯಾಗಿಲ್ಲ ಎಂದು ಜಮಾತಿನ ಸದಸ್ಯ ಆಶಿಕ್ ಹೈಕೋರ್ಟ್ ಮೆಟ್ಟಿಲೇರಿ ಪ್ರಶ್ನಿಸಿದ್ದು, ಈ ಕೂಡಲೇ ರಾಜ್ಯ ವಕ್ಫ್ ಬೋರ್ಡ್ ಮಸೀದಿಯ ಆಡಳಿತವನ್ನು ಕೈಗೆತ್ತಿಗೊಳ್ಳುವಂತೆ 2024ರ ನವೆಂಬರ್ 28ರಂದು ಹೈಕೋರ್ಟ್ ಮಧ್ಯಾಂತರ ನೋಟೀಸ್ ನೀಡಿದೆ. ಆದರೆ, ಈ ಕುರಿತು ಯಾವುದೇ ಕ್ರಮಕ್ಕೆ ಸಂಬಂಧಪಟ್ಟವರು ಮುಂದಾಗದಿರುವುದು ದೂರುದಾರರಲ್ಲಿ ಆತಂಕ ಮೂಡಿಸಿದೆ ಎಂದಿದ್ದಾರೆ.
ಈ ಕೂಡಲೇ ಮಸೀದಿಗೆ ನೂತನ ಆಡಳಿತ ಅಧಿಕಾರಿ ನೇಮಿಸಬೇಕು. ಮಸೀದಿಗೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಜಿಲ್ಲಾ ವಕ್ಫ್ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗುವುದಾಗಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಬಾ ಜಾನ್, ಆಶಿಕ್, ಮಹಮ್ಮದ್ ಸರೂಫ್, ಅಬ್ದುಲ್ ಖಾನ್, ನಜೀರ್, ದಸ್ತಗೀರ್ ಮೊದಲಾವರು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.