ಅಪರಾಧ ಸುದ್ದಿ

ಹೊಸನಗರ ; ಲಂಚ ಪಡೆಯುತ್ತಿದ್ದಾಗ ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ವಶಕ್ಕೆ !

HOSANAGARA ; ನ್ಯಾಯಾಲಯದಲ್ಲಿರುವ ಕ್ರಿಮಿನಲ್ ವ್ಯಾಜ್ಯವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದಾಗಿ ತಿಳಿಸಿ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ರವಿ ರಿಪ್ಪನ್‌ಪೇಟೆ ಸಮೀಪದ ಕೆರೆಹಳ್ಳಿ ಗ್ರಾಮದ ಅಂಜನ್‌ಕುಮಾರ್ ಅವರಿಂದ 3 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕ್ರಿಮಿನಲ್ ಪ್ರಕರಣವನ್ನು ರಾಜೀ ಮೂಲಕ ತ್ವರಿತವಾಗಿ ಮುಕ್ತಾಗೊಳಿಸುತ್ತೇನೆ. 5 ಸಾವಿರ ರೂ. ಖರ್ಚಾಗುತ್ತದೆ ಎಂದು ತಿಳಿಸಿ ಅಂಜನ್‌ಕುಮಾರ್ ಅವರಿಂದ 1 ಸಾವಿರ ರೂ. ಪಡೆದಿದ್ದರು. ಈ ಬಗ್ಗೆ  ದಾಖಲೆ ಸಮೇತ ಅಂಜನ್‌ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ರವಿ ಶುಕ್ರವಾರ ಅಭಿಯಂತಕರ ಕಛೇರಿಯ  ಆವರಣದಲ್ಲಿ 3 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ಮೂಲದ ಕೆ.ರವಿ ಇತ್ತೀಚೆಗಷ್ಟೇ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನ್ಯಾಯಾಂಗ ಇಲಾಖೆಗೆ ನಿಯುಕ್ತಿಗೊಂಡಿದ್ದರು. ಇದು ಅವರ ಮೊದಲ ಕಾರ್ಯ ಸ್ಥಳವಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಘಟನಾ ವಿವರ :

ರಿಪ್ಪನ್‌ಪೇಟೆಯ ಕೆರೆಹಳ್ಳಿ ಗ್ರಾಮದ ಅಂಜನ್‌ಕುಮಾರ್ ರವರು 2022 ರ ಸೆಪ್ಟೆಂಬರ್‌ನಲ್ಲಿ ರಬ್ಬರ್ ಮರ ಲೀಜ್ ವಿಚಾರವಾಗಿ ಗವಟೂರು ಗ್ರಾಮದಲ್ಲಿ ಗಣಪತಿ ಹಾಗೂ ಇತರರೊಂದಿಗೆ ಜಗಳವಾಗಿತ್ತು. ಈ ಬಗ್ಗೆ ಎರಡು ಕಡೆಯಿಂದ ಪ್ರಕರಣ ದಾಖಲಾಗಿದ್ದು, ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎರಡೂ ಕೇಸ್‌ನಲ್ಲಿ ತನಿಖೆ ಪೂರೈಸಿ, ಹೊಸನಗರದ ಸೀನಿಯ‌ರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದರು. 

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ದೂರು ನೀಡಿದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವೇಳೆ ಈ ಕೇಸ್‌ ಅನ್ನು ಸಹಾಯಕ ಸರ್ಕಾರಿ ಅಭಿಯೋಜಕರು ರವಿ.ಕೆ ವಾದ ಮಾಡಿದ್ದರು. ಆದರೆ, 2024ರ ಅ.28 ರಂದು ಅಂಜನ್ ಕುಮಾರ್ ಸ್ನೇಹಿತನೊಂದಿಗೆ ಹೊಸನಗರ ಕೋರ್ಟ್‌ಗೆ ಹೋಗಿ, ಎಪಿಪಿ ರವಿ ರವರನ್ನು ಭೇಟಿ ಮಾಡಿದಾಗ, ರವಿ ಕೇಸ್ ರಾಜಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಕೇಸ್ ನಡೆಸಿದರೆ 05 ವರ್ಷ ಆಗುತ್ತದೆ. ಆ ಸಮಯದಲ್ಲಿ ಬಂದು ಹೋಗುವ ಖರ್ಚು, ಊಟ ತಿಂಡಿ ಖರ್ಚು ಆಗುತ್ತದೆ. ತಾನು ಕೇಸ್ ಮುಗಿಸಿಕೊಡುತ್ತೇನೆ. ಕೇಸ್ ಮುಗಿಸಿಕೊಡಬೇಕಾದರೆ 5 ಸಾವಿರ ರೂ. ಕೊಡಬೇಕು ಎಂದು ಹೇಳಿ,1 ಸಾವಿರ ರೂ. ಹಣವನ್ನು ತೆಗೆದುಕೊಂಡಿದ್ದರು. 

ಇಂದು ಕೇಸ್ ಇದ್ದುದ್ದರಿಂದ ಬೆಳಗ್ಗೆ ಸುಮಾರು 10-30 ಗಂಟೆಗೆ ಹೊಸನಗರ ಕೋರ್ಟ್ ಆವರಣದಲ್ಲಿಯೇ ಇದ್ದ ಎಪಿಪಿ ರವಿ ರವರ ಛೇಂಬರ್‌ಗೆ ಹೋದ ಅಂಜನ್ ಕುಮಾರ್ ಗೆ ಪುನಃ 3 ಸಾವಿರ ರೂ. ಕೊಡು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 

ಈ ಸಂಭಾಷಣೆಯನ್ನು ಅಂಜನ್ ಕುಮಾರ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಎಪಿಪಿ ರವಿ ರವರು ಕೇಸ್ ಅನ್ನು ಮುಗಿಸಿಕೊಡಲು 3 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ನನಗೆ ಹಣಕೊಡಲು ಮನಸ್ಸಿಲ್ಲ ಎಂದು ಅಂಜನ್ ಕುಮಾರ್ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.‌ ಹಣ ಪಡೆಯುವಾಗ ಎಪಿಪಿ ರವಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ‌. 

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]