ಶಿವಮೊಗ್ಗ ಸುದ್ದಿ ಶಿವಮೊಗ್ಗ

ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನವದೆಹಲಿಯಲ್ಲಿ ಮನವಿ: ಅಕ್ರಮ ಆಮದು ತಡೆಗೆ ಅಮಿತ್ ಶಾ ಬಳಿ ನಿಯೋಗ

ನವದೆಹಲಿ: ದೇಶೀಯ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಅಕ್ರಮ ಅಡಿಕೆ ಆಮದು ಮತ್ತು ಕಳ್ಳಸಾಗಣೆ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಹಿರಿಯ ನಾಯಕ ಆರಗ ಜ್ಞಾನೇಂದ್ರ,ಸಂಸದ ರಾಘವೇಂದ್ರ , ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಸೇರಿದಂತೆ ಪ್ರಮುಖರು ನಿಯೋಗದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ಅಡಿಕೆ ಬೆಳೆಗಾರ ರೈತ ಕುಟುಂಬಗಳು ವಿದೇಶಿ ಅಡಿಕೆಯ ಅಕ್ರಮ ನುಸುಳುವಿಕೆಯಿಂದ ಮಾರುಕಟ್ಟೆಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಅಕ್ರಮ ಆಮದು ಹಾಗೂ ಕಳ್ಳಸಾಗಣೆಯಿಂದ ದೇಶೀಯ ಅಡಿಕೆ ಬೆಲೆಯಲ್ಲಿ ಅಸ್ಥಿರತೆ ಉಂಟಾಗುತ್ತಿದ್ದು, ರೈತರಿಗೆ ನ್ಯಾಯಯುತ ದರ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ನಿಯೋಗ ಸಚಿವರ ಗಮನಕ್ಕೆ ತಂದಿದೆ.

ಅಡಿಕೆ ಆಮದುಗೆ ನಿಗದಿಪಡಿಸಿರುವ ಪ್ರತಿ ಕೆಜಿಗೆ ₹351 ಕನಿಷ್ಠ ಆಮದು ಬೆಲೆಯನ್ನು ಗಡಿ ಪ್ರದೇಶಗಳು ಹಾಗೂ ಬಂದರುಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಿಯೋಗ ಆಗ್ರಹಿಸಿದೆ. ಕನಿಷ್ಠ ಆಮದು ಬೆಲೆ ನಿಯಮ ಇದ್ದರೂ, ವಿವಿಧ ಮಾರ್ಗಗಳಿಂದ ಅಡಿಕೆ ಅಕ್ರಮವಾಗಿ ದೇಶಕ್ಕೆ ಬರುತ್ತಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ತಿಳಿಸಲಾಗಿದೆ.

‘ಹುರಿದ ಒಣಹಣ್ಣುಗಳು ಮತ್ತು ಬೀಜಗಳು’ ಎಂಬ ಹೆಸರಿನಲ್ಲಿ ತಪ್ಪು ಘೋಷಣೆ ಮಾಡಿ ಅಡಿಕೆ ಆಮದು ಮಾಡಿಕೊಳ್ಳುವ ಪ್ರಕರಣಗಳನ್ನೂ ತಡೆಗಟ್ಟಬೇಕು. ಪ್ರವೇಶ ದ್ವಾರಗಳಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿ, ಕಾನೂನುಬಾಹಿರ ಆಮದು ಮಾರ್ಗಗಳನ್ನು ಮುಚ್ಚಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಗೃಹ ಸಚಿವಾಲಯ, ವಾಣಿಜ್ಯ ಸಚಿವಾಲಯ, ಸಿಬಿಐಸಿ, ಡಿಆರ್‌ಐ ಹಾಗೂ ಕಸ್ಟಮ್ಸ್ ಇಲಾಖೆಗಳ ಸಮನ್ವಯದಲ್ಲಿ ಜಂಟಿ ತನಿಖಾ ಪಡೆ ರಚಿಸಿ, ಅಕ್ರಮ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಿ ಧ್ವಂಸಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.

ದೇಶೀಯ ಅಡಿಕೆ ಬೆಳೆಗಾರರು ಹೆಚ್ಚುವರಿ ಕೊಡುಗೆ ಅಥವಾ ವಿಶೇಷ ಸೌಲಭ್ಯ ಕೇಳುತ್ತಿಲ್ಲ. ಜಾರಿಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ರೈತರಿಗೆ ನ್ಯಾಯಯುತ ಮಾರುಕಟ್ಟೆ ಸಿಗುವಂತೆ ಮಾಡಬೇಕು ಎಂಬುದೇ ಪ್ರಮುಖ ಬೇಡಿಕೆಯಾಗಿದೆ ಎಂದು ಪ್ರತಿನಿಧಿಗಳು ತಿಳಿಸಿದ್ದಾರೆ.

ಅಮಿತ್ ಶಾ ಅವರೊಂದಿಗೆ ನಡೆದ ಚರ್ಚೆಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ, ಅಕ್ರಮ ಆಮದು ಪರಿಣಾಮ ಹಾಗೂ ಗಡಿ ಕಣ್ಗಾವಲು ಅಗತ್ಯತೆಗಳ ಬಗ್ಗೆ ವಿವರವಾಗಿ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವನ್ನು ನಿಯೋಗ ವ್ಯಕ್ತಪಡಿಸಿದೆ.

Leave a Comment