ರಿಪ್ಪನ್ಪೇಟೆ ; “ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಕೇವಲ ನಟರಲ್ಲ, ಮಾನವೀಯತೆ, ಸರಳತೆ ಹಾಗೂ ಸೇವಾಭಾವದ ಜೀವಂತ ಪ್ರತಿರೂಪವಾಗಿದ್ದರು. ಅವರ ಜೀವನ ಕನ್ನಡಿಗರ ಆತ್ಮಗೌರವದ ಪ್ರತಿಫಲ. ಶ್ರಮ, ವಿನಯ ಮತ್ತು ಪರೋಪಕಾರ ಎಂಬ ಮೌಲ್ಯಗಳಿಂದ ಅವರು ಹೊಸ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ,” ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ.ಆರ್. ಗೋಪಾಲಕೃಷ್ಣ ಹೇಳಿದರು.
ಪುನೀತ್ ರಾಜ್ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ರಿಪ್ಪನ್ಪೇಟೆಯಲ್ಲಿ ಭಾವಪೂರ್ಣ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಆರ್.ಎ. ಚಾಬುಸಾಬ್ ಅವರು, “ಬಾಲ್ಯದಲ್ಲಿಯೇ ಚಿತ್ರರಂಗ ಪ್ರವೇಶಿಸಿ ಜನಮನ ಗೆದ್ದ ಅಪ್ಪು ಅವರ ನಿಜವಾದ ಹೀರೋತನ ಪರದೆ ಹಿಂದೆ ಕಾಣಿಸಿತು. ಶಾಲೆಗಳಿಗೆ ದೇಣಿಗೆ ನೀಡುವುದು, ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು, ಅಗತ್ಯ ಸಂದರ್ಭಗಳಲ್ಲಿ ಸಹಾಯ ಮಾಡುವುದು ಇವುಗಳೆಲ್ಲ ಅವರ ಮಾನವೀಯತೆಗೂ ಮಾದರಿಯಾಗಿದೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷೆ ಶೀಲಾ ಆರ್.ಡಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕಸ್ತೂರಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್, ಹಸನಬ್ಬ ಸಂಘದ ಪ್ರಮುಖ ಬಂಡಿ ನೇಮಣ್ಣ, ಆಸೀಫ್ ಭಾಷಾ, ನಿರೂಪ್ ಕುಮಾರ್, ಲೇಖನಾ ಚಂದ್ರನಾಯ್ಕ್, ಸಾಜೀದಾ ಹನೀಫ಼್, ಪಿಯೂಸ್ ರೊಡ್ರಿಗಸ್, ಮಂಜುನಾಥ್ ಮಳವಳ್ಳಿ, ವಾಣಿ ಗೋವಿಂದಪ್ಪಗೌಡ, ಪ್ರಕಾಶ್ ಪಾಲೇಕರ್, ಶಂಶುದ್ದೀನ್ ಆರ್.ಎಸ್, ವಿಜಯ್ ಮಳವಳ್ಳಿ, ನಿರಂಜನ್ ಕನ್ನಡಿಗ, ಎಲ್. ರಾಘವೆಂದ್ರ, ಪತ್ರಕರ್ತ ರಫಿ ರಿಪ್ಪನ್ಪೇಟೆ ಮತ್ತಿತರರು ಉಪಸ್ಥಿತರಿದ್ದರು.

