ರಿಪ್ಪನ್ಪೇಟೆ ; ಪ್ರಾಣಿ ಬೇಟೆಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮದ್ವತಿ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಐವರ ಗುಂಪನ್ನು ಅರಣ್ಯಾಧಿಕಾರಿ ಪವನ್ ಕುಮಾರ್ ಎನ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಮಂಗಳವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಶಂಕಾಸ್ಪದ ಮಾಹಿತಿ ಲಭ್ಯವಾದ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ನಾಡ ಬಂದೂಕು, ಮದ್ದು ಗುಂಡು ಹಾಗೂ ಮಾರುತಿ ಆಲ್ಟೋ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ವಿಶ್ವನಾಥ, ಬಳಸಗೋಡು ಗ್ರಾಮದ ಚನ್ನವೀರಮೂರ್ತಿ ಹಾಗೂ ಹಾಲೇಶ ಎಂದು ಗುರುತಿಸಲಾಗಿದೆ. ಗಾಜಿನಗೋಡು ಮೂಲದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಒ ಪುಟ್ಟಣ್ಣ ಕೆ, ಫಾರೆಸ್ಟ್ ಗಾರ್ಡ್ ಸಚಿನ್ ಕೆ ಟಿ, ವಾಚರ್ ಸವಿನ್ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

