ಹೊಸನಗರ : ನಾಡಿನ ಗಂಡು ಕಲೆ, ಶ್ರೀಮಂತ ಕಲೆ ಎಂದೆನಿಸಿದ ಯಕ್ಷಗಾನ ಕಲೆ ಇಂದು ಸರ್ವ ವ್ಯಾಪಿಯಾಗಿದ್ದಲ್ಲದೇ ಸರ್ವ ಸ್ಪರ್ಶಿ ಸವ್ಯಸಾಚಿ ಕಲೆಯಾಗಿ ರೂಪುಗೊಂಡಿದೆ ಎಂದು ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್ ರಾವ್ ಹೇಳಿದರು.
ತಾಲ್ಲೂಕಿನ ನಾಗರಕೊಡಿಗೆಯಲ್ಲಿ ಯಕ್ಷ ಅಭಿಮಾನಿ ಬಳಗ ಆಶ್ರಯದಲ್ಲಿ ಮಂಗಳವಾರ ನಡೆದ ‘ನಾಗರಕೊಡಿಗೆ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನ ಕಲೆ ಹಿಂದೆ ದಕ್ಷಿಣೋತ್ತರ ಜಿಲ್ಲೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ನಾಡಿನ ಉದ್ದಗಲಕ್ಕೂ ವ್ಯಾಪಿಸಿದೆ. ಅಲ್ಲದೆ ಹೊರದೇಶದಲ್ಲೂ ಹೆಸರು ಮಾಡಿದೆ. ಯಕ್ಷಗಾನ ಕಲೆ ಶ್ರೀಮಂತ ಕಲೆಯಾಗಿ ರೂಪುಗೊಳ್ಳುವಲ್ಲಿ ಧೀಮಂತ ಕಲಾವಿದರ ಶ್ರಮ ಸಾಕಷ್ಟಿದೆ. ಕಲೆಯ ವೈಭವ ಸಾಕ್ಷಿಕರಣಕ್ಕೆ ವೇದಿಕೆ ಸೃಷ್ಟಿಸುವಲ್ಲಿ ಸಂಯೋಜಕರ ಪಾತ್ರ ಹಿರಿದಾಗಿದೆ. ಕಲಾ ಪೋಷಕರು ಹೆಚ್ಚು ಹೆಚ್ಚು ದೊರಕಿದಲ್ಲಿ ಮಾತ್ರ ಪ್ರದರ್ಶನ ಯಶಸ್ವಿಯಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಹನುಮಗಿರಿ ಮೇಳದ ಹಿರಿಯ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಗರಕೊಡಿಗೆ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಾಗೇಶ ಭಾಗವತ್, ವೇಣು ಭಟ್, ಶ್ರೀಧರ್, ಭಾಸ್ಕರ್, ಅಕ್ಷಯ್ ಭಟ್, ಆಗ್ನೇಯ, ಕಾರ್ತಿಕ್, ಹಿರಿಯಣ್ಣ ಭಟ್, ರವೀಂದ್ರ, ಅನೂಪ್, ಮಂಜುನಾಥ್, ಪ್ರಮಥ ವಸಿಷ್ಠ ಇದ್ದರು. ಪತ್ರಕರ್ತೆ ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಶ್ರೀ ಕೊದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಅವರಿಂದ ವರ್ಣ ಪಲ್ಲಟ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.