ರಿಪ್ಪನ್ಪೇಟೆ : ನಾಡಕಛೇರಿ ಹಿಂಭಾಗದ ಬರುವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಇರುವ, ರೆವಿನ್ಯೂ ಇನ್ಸ್ಪೆಕ್ಟರ್ ವಸತಿ ನಿವೇಶನಕ್ಕಾಗಿ ಮೀಸಲಿಟ್ಟ ಸರ್ಕಾರಿ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮ ಬೇಲಿ ನಿರ್ಮಾಣ:
ಗೌರಿ-ಗಣೇಶ ಹಬ್ಬದ ಸಾಲು ಸಾಲು ರಜೆಗಳ ಲಾಭ ಪಡೆದು, ನ್ಯಾಯಾಲಯದ ಹಸ್ತಕ್ಷೇಪ ಹಾಗೂ ಅಧಿಕಾರಿಗಳ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಖಾಸಗಿ ವ್ಯಕ್ತಿಯೋರ್ವ ಕಲ್ಲು ಕಂಬ ಮತ್ತು ತಂತಿ ಬೇಲಿ ಹಾಕಲಾಗಿದೆ.
ಅಧಿಕಾರಿಗಳ ಮೌನಕ್ಕೆ ಶಂಕೆ:
ಸಾಮಾನ್ಯ ಬಡಜನರು ಸಣ್ಣ ಮಟ್ಟದ ಅತಿಕ್ರಮಣ ಮಾಡಿದ ತಕ್ಷಣವೇ ತೆರವುಗೊಳಿಸುವ ನಾಡಕಛೇರಿ ಸಿಬ್ಬಂದಿಗಳು, ಪ್ರಭಾವಿ ವ್ಯಕ್ತಿಯ ಈ ಅಕ್ರಮದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮರುಕಳಿಸಿದ ಅತಿಕ್ರಮಣ ಯತ್ನ:
ಕಳೆದ ಏಳೆಂಟು ವರ್ಷಗಳ ಹಿಂದೆಯೂ ಇದೇ ವ್ಯಕ್ತಿ ಈ ಜಾಗವನ್ನು ಆಕ್ರಮಿಸಲು ಯತ್ನಿಸಿದ್ದರು. ಆದರೆ ಆಗಿನ ರೆವಿನ್ಯೂ ಇನ್ಸ್ಪೆಕ್ಟರ್ ಮಂಜಣ್ಣ ಮತ್ತು ಸಿಬ್ಬಂದಿಗಳು ಬೇಲಿ ತೆರವುಗೊಳಿಸಿ, ‘ಆರ್ಐ ನಿವಾಸಕ್ಕೆ ಕಾಯ್ದಿರಿಸಿದ ಜಾಗ’ ಎಂದು ಫಲಕ ಹಾಕಿದ್ದರು.
ಮಾಹಿತಿ ಇದ್ದರೂ ತಡೆಯದ ನಿರ್ಲಕ್ಷ್ಯ:
ಅಂದು ಕ್ರಮ ಕೈಗೊಂಡಿದ್ದ ಮಂಜಣ್ಣ ಅವರೀಗ ತಾಲೂಕು ಕಛೇರಿಯಲ್ಲಿ ಶಿರಸ್ತೇದಾರರಾಗಿದ್ದು, ಅವರಿಗೆ ಸಂಪೂರ್ಣ ವಿಷಯ ತಿಳಿದಿದ್ದರೂ ತೆರವುಗೊಳಿಸಲು ಮುಂದಾಗದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರಿ ಸ್ವತ್ತನ್ನು ರಕ್ಷಿಸಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಅಕ್ರಮ ಬೇಲಿಯನ್ನು ತೆರವುಗೊಳಿಸಿ, ಜಾಗವನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

