ರಿಪ್ಪನ್ಪೇಟೆ : ಮಳೆ ಬಾರದೇ ರೈತರು ಬೆಳೆ ಬೀಜ ಬಿತ್ತಿಲು ಹಿಂಜರಿಕೆಯಲ್ಲಿದ್ದು ನಿತ್ಯ ಮುಗಿಲು ನೋಡುವಂತಾಗಿದ್ದು ಸರ್ಕಾರ ಬರ ಘೋಷಣೆ ಮಾಡಿದರೆ ಬೆಳೆ ವಿಮೆ ಸರ್ಕಾರದ ಪರಿಹಾರ ದೊರೆಯುವುದೆಂಬ ಆಶಾ ಭಾವನೆಯಲ್ಲಿದರೆ ಇಲ್ಲಿನ ರಾಷ್ಟ್ರೀಕೃತ ಕೆನರಾ ಬ್ಯಾಂಕ್ನಲ್ಲಿ ಕನ್ನಡ ಭಾಷೆ ಬಾರದೆ ಅಧಿಕಾರಿಗಳ ದುಂಡಾವರ್ತನೆಯಿಂದಾಗಿ ಪರದಾಡುವಂತಾಗಿದೆ ಎಂದು ನೊಂದ ರೈತರು ಬ್ಯಾಂಕ್ ವ್ಯವಸ್ಥೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಆರು ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದ ಇಲ್ಲಿನ ಶಾಖಾ ವ್ಯವಸ್ಥಾಪಕರಿಗೆ ಕನ್ನಡ ಭಾಷೆಯ ಜ್ಞಾನವೇ ಇಲ್ಲ. ಗ್ರಾಹಕರು ಬ್ಯಾಂಕ್ಗೆ ಹೋಗಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರೆ ಕನ್ನಡ ಬರುವುದಿಲ್ಲ ಅಲ್ಲೆ ಪಕ್ಕದವರ ಬಳಿ ಕಳುಹಿಸುತ್ತಾರೆ. ಅವರಿಗೂ ಕನ್ನಡ ಭಾಷೆ ಬರುವುದಿಲ್ಲ. ಒಟ್ಟಾರೆಯಾಗಿ ಇಲ್ಲಿನ ಕೆನರಾ ಬ್ಯಾಂಕ್ ಕನ್ನಡ ಭಾಷೆಯ ಸಿಬ್ಬಂದಿಗಳಿಲ್ಲದೆ ಗ್ರಾಹಕರು ಪರದಾಡುವಂತಾಗಿದೆ.
ರೈತರು ಬೆಳೆ ಸಾಲಕ್ಕಾಗಿ ಬ್ಯಾಂಕ್ಗೆ ಹೋದರೆ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯ ದಿಂದ ನೋಡುತ್ತಾರೆ. ಇನ್ನೂ ಗ್ರಾಹಕರೇ ಬ್ಯಾಂಕ್ಗೆ ಜೀವಾಳ ಎನ್ನುವ ಬದಲು ಅಧಿಕಾರಿಗಳೇ ಬ್ಯಾಂಕ್ ಪ್ರಗತಿಗೆ ಜೀವಾಳ ಎನ್ನುವಂತಾಗಿದೆ. ಹೆಚ್ಚಿಗೆ ಕೇಳಿದರೆ ಮೌನಕ್ಕೆ ಶರಣಾಗುವ ಅಧಿಕಾರಿ, ಸಿಬ್ಬಂದಿವರ್ಗ ಗ್ರಾಮೀಣ ಜನರಿಗೆ ಇದರಿಂದಾಗಿ ನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆಯಾದರೂ ಪರಿಹಾರ ಮಾತ್ರ ಕಾಣದಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆಳೆ ವಿಮೆಗೆಂದು ಪ್ರಕಟಣೆ ಹೊರಡಿಸಲಾದರೂ ಕೂಡಾ ಬ್ಯಾಂಕ್ನ ಅಧಿಕಾರಿಗಳು ಮಾತ್ರ ಯಾವುದನ್ನು ಲೆಕ್ಕಿಸದೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಸಾಲ ಪಡೆಯುವ ರೈತರುಗಳಿಗೆ ಆ ಬ್ಯಾಂಕ್ನವರೇ ಬೆಳೆ ವಿಮೆ ಮಾಡಬೇಕು ಎಂಬ ನಿಯಮವಿದ್ದರೂ ಕೂಡಾ ಯಾವುದನ್ನು ಪರಿಗಣಿಸದೆ ಖಾಸಗಿ ಗ್ರಾಮ ಒನ್ ಅಥವಾ ಸೈಬರ್ ಸೆಂಟರ್ ಇನ್ನಿತರ ಕಡೆಯಲ್ಲಿ ಮಾಡಿಸಿಕೊಳ್ಳಿ ಎಂದು ಸಾಗ ಹಾಕುತ್ತಿದ್ದಾರೆ. ವಿಚಾರಿಸಿದರೆ ಗೊತ್ತಿಲ್ಲದವರಂತೆ ನಾಟಕ ಮಾಡುತ್ತಾರೆ. ಭಾಷೆ ಬಾರದ ಅಧಿಕಾರಿಗಳಿಂದಾಗಿ ನಮ್ಮ ರೈತರು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ.
ಒಂದು ಕಡೆ ಮಳೆ ಇಲ್ಲದೆ ತೀವ್ರ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಬ್ಯಾಂಕ್ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರೈತರ ಗೋಳು ಕೇಳೋರಿಲ್ಲದಂತಾಗಿದೆ. ಇನ್ನಾದರೂ ಸಂಬಂಧಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಹಕರಿಗಾಗುತ್ತಿರುವ ತೊಂದರೆಯನ್ನು ಸರಿಪಡಿಸಲು ಮುಂದಾಗುವರೇ ಕಾದು ನೋಡುವಂತಾಗಿದೆ.

