ಹೊಂಬುಜ ; ಪ್ರಾಚೀನ ಜೈನತೀರ್ಥಕ್ಷೇತ್ರ ಅತಿಶಯ ಶ್ರೀಕ್ಷೇತ್ರ ಎಂದು ಜನಮಾಸನದಲ್ಲಿ ಪ್ರಸಿದ್ಧಿಯಾಗಿರುವ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಅಭೀಷ್ಠವರಪ್ರದಾಯಿನಿ ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ 7 ದಶಕಗಳ ಪೂರ್ವದಲ್ಲಿ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠವನ್ನು ಶ್ರೀ ಸರಸ್ವತಿ ದೇವಿ ಹರಸುವ ಮೂಲಕ ಪೂರ್ವ ಭಟ್ಟಾರಕರಾಗಿದ್ದ ಸ್ವರ್ಗೀಯ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅರಹದ್ದಾಸ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಸಮಾಜದ ಸಮ್ಯಕ್ತ್ವ ಬಂಧುವರ್ಗದವರ ಸಹಕಾರ ಸಹಯೋಗದಲ್ಲಿ ಹೊಂಬುಜದಲ್ಲಿ ಆರಂಭಿಸಿದ್ದರು.

ಧಾರ್ಮಿಕ ಶಿಕ್ಷಣ-ನೈತಿಕ ಶಿಕ್ಷಣದೊಂದಿಗೆ ಜ್ಞಾನ ವಿಜ್ಞಾನ ಕಲಿಯಲು ಸಹಸ್ರಾರು ವಿದ್ಯಾರ್ಥಿಗಳು ಈಗಾಗಲೇ ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ಆಶ್ರಯದಲ್ಲಿ ಉತ್ತಮ ಶೈಕ್ಷಣಿಕ ಯಶಸ್ಸಿನೊಂದಿಗೆ ಸಮಾಜದಲ್ಲಿ ಮನ್ನಣೆ ಪಡೆದು ಪ್ರಸಿದ್ಧರಾಗಿ ಸೇವಾ ತತ್ಪರತೆಯ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿರುವುದು ದಾಖಲಾರ್ಹವಾಗಿದೆ.
ಜೈನ ಧರ್ಮದ ಶಾಸ್ತ್ರ, ಆರಾಧನೆ, ಚರ್ಯೆಗಳ ಮಹತ್ವ, ಗ್ರಂಥಸ್ವಾದ್ಯಾಯ, ಯೋಗ, ಜ್ಯೋತಿಷ್ಯಶಾಸ್ತ್ರ, ಸಂಗೀತ, ನಾಟ್ಯ, ನಾಟಕಗಳ ಆಸಕ್ತಿ ರೂಪಿಸುವ ಗುರುಕುಲ ಶಿಕ್ಷಣದಿಂದ ಭಾರತೀಯ ಜೈನ ಪರಂಪರೆ ಮುಂದುವರಿಯಲು ಹೊಂಬುಜ ಶ್ರೀ ಕುಂದಕುಂದ ವಿದ್ಯಾಪೀಠವು ಮುನಿಶ್ರೀಗಳ, ಆರ್ಯಿಕೆಯರ, ಭಟ್ಟಾರಕರ, ಪಂಡಿತರ ಪ್ರಶಂಸೆ ಪಡೆದಿರುವುದು.

ಇಂದು ಶ್ರೀ ಹೊಂಬುಜ ಜೈನ ಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಶೀಘ್ರ ನೂತನ ಕಟ್ಟಡ ಗುರುಕುಲ ವಿದ್ಯಾಪೀಠದ ಭವಿಷ್ಯದ ವಿದ್ಯಾರ್ಥಿಗಳವರಿಗೆ ಸಮ್ಯಕ್ತ್ವ ಬಂಧುವರ್ಗದವರ ತನು ಮನ ಧನ ಸಹಯೋಗದಲ್ಲಿ ನಿರ್ಮಾಣವಾಗಲೆಂದು ಆಶಿಸಿದರು.

ಶ್ರೀ ಪಾರ್ಶ್ವನಾಥ ಸ್ವಾಮಿ ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಶ್ರೀ ಸರಸ್ವತಿ ದೇವಿ ಹರಸಲೆಂದು ಪ್ರಾರ್ಥಿಸಿದರು.

