ಹೊಂಬುಜ : “ಜೈನ ಧರ್ಮದ ಉಪದೇಶಾಮೃತವು ಲಿಪಿಬದ್ಧವಾದ ಸುದಿನವನ್ನು ಶ್ರುತಪಂಚಮಿ ಎಂಬ ಪರ್ವವಾಗಿ ಆಚರಿಸಲಾಗುವುದು. ಶ್ರೀ ಮಹಾವೀರ ತೀರ್ಥಂಕರರ ದಿವ್ಯಧ್ವನಿಯಿಂದ ಪ್ರಸಾರ ಮಾಡಿದ ಜೈನಮೂಲ ಸಿದ್ಧಾಂತಗಳನ್ನು ಧವಳ-ಜಯಧವಳ-ಮಹಾಧವಳ ಗ್ರಂಥಗಳಾಗಿ ಇಂದಿಗೂ ಧರ್ಮಪರಂಪರೆಯಲ್ಲಿ ಮಾರ್ಗದರ್ಶಕಗಳಾಗಿವೆ” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ತಿಳಿಸಿದರು.

ಶುಕ್ರವಾರದಂದು ಪ್ರಾತಃಕಾಲದಲ್ಲಿ ಶ್ರುತಸ್ಕಂದ, ಶ್ರೀ ಜಿನವಾಣಿ ಮಾತಾ ಸರಸ್ವತಿ ದೇವಿ ಪೂಜೆ ಸಮರ್ಪಿಸಿ, ಆಧಿನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.

“ಜ್ಞಾನವಂತರಾಗಲು, ಸದ್ಧರ್ಮ ಸಮ್ಯಕ್ತ್ವ ಗುಣ ಪ್ರಾಪ್ತಿಯಾಗಲು ಜೈನಧರ್ಮದ ಸಿದ್ಧಾಂತಗಳು ಸರ್ವಕಾಲದಲ್ಲಿಯೂ ಜೀವನ ದೀಪ್ತಿ ಆಗಿದೆ” ಎಂದು ಅನುಗ್ರಹ ಪ್ರವಚನದಲ್ಲಿ ವ್ರತಧಾರಿ ಬಾಲಕ/ಬಾಲಕಿಯರಿಗೆ ಹರಸಿ, ಆಶೀರ್ವದಿಸಿ, ಜಿನವಾಣಿ ಸತ್ಪ್ರೇರಣೆ ಸದಾ ಸರ್ವರ ಬಾಳನ್ನು ಬೆಳಗಿಸಲೆಂದರು.

29 ವ್ರತದಾರಿಗಳಿಗೆ ವ್ರತಸ್ವೀಕಾರ ವಿಧಿಯ ಬಳಿಕ, ಜಿನವಾಣಿ ಶ್ರುತಸ್ಕಂದ ಆರಾಧಿಸಿ, 13 ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಶ್ರೀಗಳವರು ಮಾಡಿಸಿ ಹರಸಿದರು.
ಶ್ರೀ ನೇಮಿನಾಥ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸ್ವಾಮಿ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆಯಲ್ಲಿ ಊರ-ಪರವೂರ ಭಕ್ತರು ಪಾಲ್ಗೊಂಡು ಧನ್ಯರಾದರು.

ಜೈನ ಜಿನವಾಣಿ ಮಾತಾ, ಸರಸ್ವತಿ ದೇವಿ ಕೀ ಜೈ, ಜೈನ ಧರ್ಮಕೀ ಜೈ, ಶ್ರೀ ಪದ್ಮಾವತಿ ದೇವಿಕೀ ಜೈ ಎಂದು ಭಕ್ತಿಭಾವಗಳಿಂದ ಜಯಕಾರ ಮೊಳಗಿಸಿದರು. ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದವರು ಉಪಸ್ಥಿತರಿದ್ದರು.

