ಸಾಗರ : ಬ್ಯಾಂಕ್ ಸಾಲದ ನೋಟಿಸ್ ವಿಚಾರಕ್ಕೆ ಸಂಬಂಧಿಸಿದ ಜಗಳದ ವೇಳೆ ಅಣ್ಣನೇ ತಮ್ಮನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಆನಂದಪುರ ಸಮೀಪದ ಮಾದರಸನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾದರಸನಕೊಪ್ಪ ಗ್ರಾಮದ ರಾಘವೇಂದ್ರ (39) ಎಂದು ಗುರುತಿಸಲಾಗಿದೆ. ರಾಘವೇಂದ್ರ ಅವರ ಅಣ್ಣ ಮಹೇಶ್ ಹತ್ಯೆಗೈದ ಆರೋಪಿ.

ಏನಿದು ಘಟನೆ ?
ಮಹೇಶ್ ಅವರಿಗೆ ಬ್ಯಾಂಕ್ ಸಾಲದ ನೋಟಿಸ್ ಬಂದಿದೆ ಎಂದು ಈ ವಿಚಾರದಿಂದಾಗಿ ಇಬ್ಬರ ನಡುವೆ ದ್ವೇಷ ಉಂಟಾಗಿತ್ತು. ಮೇ 23ರಂದು ರಾತ್ರಿ ಸುಮಾರು 10:30ರ ವೇಳೆಗೆ, ರಾಘವೇಂದ್ರ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮಹೇಶ್ ಅವರನ್ನು ಅಡ್ಡಗಟ್ಟಿ ಕೋಲಿನಿಂದ ಗಂಭೀರವಾಗಿ ಹಲ್ಲೆ ಮಾಡಿದರೆಂದು ತಿಳಿದು ಬಂದಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡ ರಾಘವೇಂದ್ರ ಅವರನ್ನು ತಕ್ಷಣ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಮೃತ್ ಲೈಫ್ ಲೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾದರೂ, ಅವರು ಜೂನ್ 9ರಂದು ಮುಂಜಾನೆ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ಮೃತರ ಪತ್ನಿ ಲಲಿತಾ ಅವರ ದೂರಿನ ಮೇರೆಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

