ರಿಪ್ಪನ್ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ನೆವಟೂರು ಆನೆಕೆರೆ ಸಮೀಪ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಅರಣ್ಯ ಸಂಚಾರಿ ದಳದ ಪಿಎಸ್ಐ ವಿನಾಯಕ ಕೆ. ಅವರ ನೇತೃತ್ವದ ತಂಡ, ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿ ಜಿಂಕೆಯ ದೇಹ ಹಾಗೂ ಮಾಂಸವನ್ನು ಜಪ್ತಿ ಮಾಡಿದೆ.
ಒಟ್ಟು 34.945 ಕೆ.ಜಿ. ತೂಕದ ಜಿಂಕೆಯ ದೇಹ ಹಾಗೂ ಮಾಂಸ ವಶಪಡಿಸಿಕೊಳ್ಳಲಾಗಿದ್ದು, ಈ ಕೃತ್ಯದಲ್ಲಿ ಶಾಮೀಲಾಗಿದ್ದ ನೆವಟೂರು ಆನೆಕರೆ ನಿವಾಸಿಗಳಾದ ನಿಂಗಪ್ಪ ಮತ್ತು ರಾಮಪ್ಪ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ವಿನಾಯಕ ಕೆ. ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಆಂಜನೇಯ ಪಾಟೀಲ್, ಬಿ.ಸಿ. ಗಣೇಶ, ಚಂದ್ರಕಾಂತ, ಮಹೇಶ, ಹೆಚ್.ಬಿ. ದೊಡ್ಡಮನಿ ಮತ್ತು ಪ್ರಮೋದಿನಿ ಅವರುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

