ಹೊಸನಗರ ; ಯಾವುದೇ ಸಂಘ-ಸಂಸ್ಥೆಗಳು ಯಶಸ್ವಿಯಾಗಲು ಸಂಘದ ಸದಸ್ಯರ ಕ್ರಿಯಾಶೀಲತೆ ಪ್ರಮುಖ ಪಾತ್ರವಹಿಸುತ್ತದೆ ಕ್ರೀಯಾಶೀಲತೆ ಇಲ್ಲವಾದರೇ ಸಂಘ-ಸಂಸ್ಥೆಗಳನ್ನು ಬೆಳೆಸುವುದು ಅಸಾಧ್ಯ ಎಂದು ಬಂಟರ ಯಾನೆ ನಾಡವರ ಸಂಘದ ತಾಲೂಕು ಅಧ್ಯಕ್ಷ ದಿವಾಕರ ಶೆಟ್ಟಿ ಹೇಳಿದರು.
ಇಲ್ಲಿನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳನ್ನು ದುಡಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ಧ್ಯೇಯೋದ್ದೇಶಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಅದಕ್ಕೆ ತಕ್ಕಂತೆ ಸದಸ್ಯರು, ಪದಾಧಿಕಾರಿಗಳು ಕಾರ್ಯೋನ್ಮುಖವಾದಾಗ ಗುರಿ ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಯುವಪೀಳಿಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಅವರು ಕರೆ ನೀಡಿದರು.

ಸಂಘದ ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ ಮಾತನಾಡಿ, ಸಂಘವು ಪ್ರತಿ ವರ್ಷವೂ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸುವ ಮೂಲಕ ಅವರಿಗೆ ಇನ್ನಷ್ಟು ಸಾಧಿಸುವ ಮನೋಭಾವ ಬೆಳೆಸುವಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸದಸ್ಯರಿಗೆ ಕಟ್ಟಿದ ಸಂಘ ಸಂಸ್ಥೆಗಳನ್ನು ಬೆಳೆಸಿಕೊಂಡು ಹೋಗುವ ಪರಿಜ್ಞಾನವೇ ಇಲ್ಲವಾಗಿರುವುದು ದುರದುಷ್ಟಕರ ಸಂಗತಿಯಾಗಿದ್ದು ಶೈಕ್ಷಣಿಕವಾಗಿ ಸಂಘ ಬೆಳೆಯಲು ಬೆಳೆಸಲು ಸಾಕಷ್ಟು ಅವಕಾಶಗಳು ಇದೆ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಪೆಕಟ್ಟೆ ಚಂದ್ರಶೇಖರ ಶೆಟ್ಟಿ, ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ತಾಲೂಕು ಕೇಂದ್ರದಲ್ಲಿ ಜಾಗ ಮತ್ತು ಕಟ್ಟಡ ನಿರ್ಮಾಣ ಆಗಬೇಕಿದೆ ನಾವು ಬಂಟರ ಯಾನೆ ನಾಡವರ ಸಂಘ ಹೊಸನಗರ ತಾಲ್ಲೂಕಿನಲ್ಲಿ ಕಟ್ಟಿ ಸುಮಾರು 20 ವರ್ಷಗಳು ಕಳೆದಿದೆ ಎಲ್ಲ ಸರ್ಕಾರಗಳಿಗೂ ಹಾಗೂ ಶಾಸಕರುಗಳ ಗಮನಕ್ಕೂ ಈಗಾಗಲೇ ತರಲಾಗಿದೆ. ಸರಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಯಾವುದಾದರೂ ಕಾರಣ ಹೇಳಿ ನಮ್ಮ ಫೈಲ್ ವಾಪಸ್ಸು ಬರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿ, ನಮ್ಮ ಸಂಘದಿಂದ ಆರ್ಥಿಕವಾಗಿ ಹಿಂದುಳಿದವರ ಕುಟುಂಬಗಳನ್ನು ಗುರುತಿಸಿ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದು ನಮ್ಮ ಸಂಘದ ಸದಸ್ಯರು ಕೈಜೋಡಿಸಬೇಕೆಂದು ಈ ಮೂಲಕ ಕೇಳಿಕೊಂಡರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ ಶೆಟ್ಟಿ ಮಾತನಾಡಿ, ಸಂಘದಿಂದ ಹಲವರು ತಮ್ಮ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಅಂತವರು ಸ್ವಯಂಪ್ರೇರಿತರಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಾಗೂ ಸಂಘವನ್ನು ಗಟ್ಟಿಗೊಳಿಸಲು ಮುಂದಾಗಬೇಕೆಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, ಸಂಘದ ಉತ್ತಮ ಕಾರ್ಯಗಳಿಗೆ ಸಮಾಜದ ಸದಸ್ಯರು ಗೈರು ಹಾಜರಾಗುತ್ತಾರೆ. ಆದರೆ ಅನಗತ್ಯ ಸಂದರ್ಭಗಳಲ್ಲಿ ಗುಂಪು ಸೇರುವುದು ದುರದೃಷ್ಠಕರ ಎಂದರು.

ನಿವೃತ್ತ ಸಿಆರ್ಪಿಎಫ್ ಯೋಧ ಮೋಹನಶೆಟ್ಟಿ, ನಿವೃತ್ತ ಸರಕಾರಿ ನೌಕರ ಕಿಶೋರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ದೇವಗಂಗೆ ಚಂದ್ರಶೆಟ್ಟಿ, ನಿವೃತ್ತ ಶಿಕ್ಷಕ ರಾಮಣ್ಣ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ, ಶರತ್ ಶೆಟ್ಟಿ, ಭಾಸ್ಕರ ಶೆಟ್ಟಿ, ನವೀನ ಶೆಟ್ಟಿ, ಶಶಿಕಲಾ ಶೆಟ್ಟಿ, ಕೋಡೂರು ಸುರೇಶ್ ಶೆಟ್ಟಿ, ನಾಗರಕೋಡಿಗೆ ಸುರೇಶ್ ಶೆಟ್ಟಿ, ನಂದಿನಿ ರಮೇಶ್ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಮಾಲಾಶ್ರಿ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





