ಶಿವಮೊಗ್ಗ : ಕೆಟ್ಟು ನಿಂತಿದ್ದ ಲಾರಿಗೆ (AP04UB3339) ಹಿಂಬದಿಯಿಂದ ಖಾಸಗಿ ಬಸ್ (KA51C0146) ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ 15 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರದ ಬಳಿ ಇಂದು ಬೆಳಗಿನಜಾವ ನಡೆದಿದೆ.
ಘಟನೆಯಲ್ಲಿ ಖಾಸಗಿ ಬಸ್ನ ನಿರ್ವಾಹಕ ಹೊಸನಗರದ ಕರಿನಗೊಳ್ಳಿ ನಿವಾಸಿ ಅಣ್ಣಪ್ಪ (40) ಹಾಗೂ ಚಳ್ಳಕೆರೆ ನಿವಾಸಿ ಹರ್ಷಿತ್ (35) ಮೃತರಾಗಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉಡುಪಿಯ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಸೇರಿ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಮೇಶ್ (50), ಪ್ರಸಾದ್ (40), ವಿಷ್ಣು (21), ಮಂಜುನಾಥ್ (45), ಸುಜಾತಾ (40), ಅನಂದ್ ನಾಯ್ಕ್ (50), ನೀಲಾಂಬಿಕಾ (45), ಪ್ರಸಾದ್ (43), ಬಿಂದು (20), ಶಶಾಂಕ್ (20), ಲಕ್ಷ್ಮೀ (35), ಶ್ರೀರಾಮುಲು (42) ಹಾಗೂ ಕಾರ್ತಿಕ್ (32) ಎಂಬುವರು ಗಾಯಗೊಂಡಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಖಾಸಗಿ ಬಸ್ ಮಂಗಳೂರಿನಿಂದ ಚಳ್ಳಕೆರೆಗೆ ತೆರಳುತಿತ್ತು ಎಂದು ತಿಳಿದು ಬಂದಿದೆ. ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ನ ಎಡ ಬದಿ ಸಂಪೂರ್ಣ ಹಾನಿಯಾಗಿದೆ. ಸೀಟುಗಳು ಕಿತ್ತು ಬಂದಿವೆ.
ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯಿಂದಾಗ ಈ ಭಾಗದಲ್ಲಿ ರಸ್ತೆ ಸಂಚಾಕ್ಕೆ ಅಡಚಣೆಯಾಗಿತ್ತು.

